ಅನಿವಾಸಿ

Archive for August, 2007

ನನ್ನ ಮುಖಚಿತ್ರ

In ಅಂದಂದು, ಯೋಚನೆ on August 31, 2007 at 9:55 pm

ನನ್ನ ಚಿತ್ರ ಬರಿಯೋದು ತುಂಬಾ ಸುಲಭ. ಸುಲಭ ಅಂದ ತಕ್ಷಣ ನನಗೆ ಬರಿ ಎರಡೇ ಆಯಾಮ ಅನ್ಕೋಬೇಡಿ. ಮೂರು ಆಯಾಮಾನೂ ಇದೆ. ಜಾಸ್ತಿ ಕೇಳಿದರೆ ನಾಕನೇ ಐದನೇ ಆಯಾಮಕ್ಕೂ ಚಾಚಿಕೋಬಹುದು. ಆದರೂ ಸ್ವಲ್ಪ ಹತ್ತಿರದಿಂದ ನೋಡಿದರೆ ಸಾಕು ತಕ್ಷಣ ನನ್ನ ಒಳಗೆಲ್ಲ ಗೊತ್ತಾಗೋ ಥರ ಚಿತ್ರ ಬರೀಬಹುದು.

ಓಕೆ. ಹೇಗಪ್ಪ ಅಂತ ತಲೆ ಕೆರಕೋಬೇಡಿ. ಹೀಗ್ಮಾಡಿ – ಮದ ಮತ್ಸರ ಲೋಭ ಮೋಹ ಎಲ್ಲಾನೂ ಒಂದು ಚೂರು ಚೂರು ಕತ್ತರಿಸಿ ಜೋಡಿಸಿ. ನೆಟ್ಟಗೆ ನೀಟಾಗಿ ಪಕ್ಕ ಪಕ್ಕದಲ್ಲಿ ಜೋಡಿಸಬೇಡಿ. ಒಂದರ ಮೇಲೆ ಇನ್ನೊಂದು ಇರಬೇಕು. ಲೋಭದ ಮೇಲೆ ವಕ್ರವಾಗಿ ಮದ. ಮೋಹದ ಮೂಲೆನಲ್ಲಿ ಮತ್ಸರ. ಹೀಗೆ ಸ್ವಲ್ಪ ಓರೆ ಕೋರೆ ಮಾಡಿ ಜೋಡಿಸಿ. ಎರಡು ಕಣ್ಣಗಳೂ ಸಮವಾಗಿ ಗುಂಡಗೆ ಇಡಬೇಡಿ. ಒಂದು ಸ್ವಲ್ಪ ಆಚೆಗಿಡಿ. ಒಂದು ಕಣ್ಣು ದೂರದಲ್ಲಿರೋದನ್ನ ಎವೆಯಿಕ್ಕದೆ ನೋಡೋ ಹಾಗೆ ಇದ್ದರೆ, ಮತ್ತೊಂದು ಕುರಿ ಕಣ್ಣು ಇಟ್ಟ ಹಾಗೆ ಇರಬೇಕು. ಯಾವ ಕಣ್ಣು ಹ್ಯಾಗೆ ಅಂತ ನಿಮಗೆ ನನ್ನನ್ನ ನೋಡಿದ ತಕ್ಷಣ ಗೊತ್ತಾಗತ್ತೆ. ಹಾಗೆ ಒಳ್ಳೆ ಉದ್ದನೆ ಮೂಗು ಬರೀಬೇಡಿ. ನಂದು ಮೊಂಡು. ಅಲ್ಲಲ್ಲಿ ಕೀರಿದ ಗಾಯ ಇದೆ ಮೂಗಿನ ಮೇಲೆ. ಅದನ್ನು ಮುಜುಗರ ಪಟ್ಕೊಂಡು ನೋಡದೇ ಇರಬೇಡಿ. ಬಾಯೂ ಅಷ್ಟೆ ಒಳ್ಳೇ ಗೆರೆಗಳೇನೂ ಬೇಡ. ತುಟ್ಟಿ ಹರಿದಿದೆ. ಒಂದೊಂದು ಸಲ ಅದಕ್ಕೆ ಪಿನ್ನು ಹಾಕಿಕೊಳ್ಳಬೇಕಾಗತ್ತೆ.

ಈಗ ಕರುಣೆ ಅಸಹ್ಯ ಭಯ ಎಲ್ಲಾ ದೂರಕ್ಕಿಡಿ. ಅಷ್ಟೇ ಅಲ್ಲ ತಮಾಷೆ, ದುಃಖ, ಸಿಟ್ಟು ಎಲ್ಲಾ ಮರೆತು ನನ್ನ ಅವತಾರ ನೋಡಿ. ಬರೆಯೋಕೆ ಮನಸ್ಸು ಆದರೆ, ಬರೀಯೋಕೆ ಆಗತ್ತೆ ಅನ್ನಿಸಿದರೆ ಬಣ್ಣ ಬ್ರಶ್ಶು ತಗೊಳ್ಳಿ ನಾನು ಬಂದು ನಿಮ್ಮ ಮುಂದೆ ಮಗು ಥರ ಕೂತ್ಕೋತೀನಿ.

ದೊಡ್ಡಕ್ಕೆ ಮುಖ ಬರೆದು ಅದಕ್ಕೆ ಚೆನ್ನಾಗಿ ಬಣ್ಣ ಬಳಿರಿ.
ಓರೆ-ಕೋರೆ, ಹರಿದ ತುಟಿ, ಮೂಗಿನ ಗಾಯ, ಕುರಿ ಕಣ್ಣು ಇದೆಲ್ಲಾ ಯಾರಿಗೂ ಕಾಣದ ಹಾಗೆ ಮಾಡಿಬಿಡಿ.
ಹಾಗೇ ಮುಖಕ್ಕೆ ಅಡಿಪಾಯದಂತಿದೆಯಲ್ಲ ಈ ಮದ ಮತ್ಸರ ಲೋಭ ಮೋಹ ಅದನ್ನೂ ಮುಚ್ಚಿಬಿಡಬೇಕು.
ಆವಾಗ ಎಲ್ಲಾರಿಗೂ ಇಷ್ಟ ಆಗೋ ಅಂತ ನನ್ನ ಚಿತ್ರ ತಯಾರಾಗತ್ತೆ.

ಕಿಂಡಿ-೧

In ಚಿತ್ರಗಳು on August 29, 2007 at 10:10 pm

ಗೆಳೆಯ

In ನೀಲುಗಳು, ಪದ್ಯ on August 29, 2007 at 6:54 am

ತುಂಬ ದಿನದ ಮೇಲೆ
ಎಲ್ಲೋ ಸಿಕ್ಕ ನನ್ನ ನಲ್ಲನ ಕ್ಷೌರಿಕ-
ನಲ್ಲನ ಉದ್ದಗೂದಲಿನ ಸೊಗಸುಗಾರಿಕೆ
ನೋಡಿಯೂ ನೋಡದವನಂತೆ
ಹೇಗಿದ್ದೀರೆಂದು ಮಾತ್ರ ವಿಚಾರಿಸಿ
ಬೀಳ್ಕೊಟ್ಟ
ದೊಡ್ಡ ಮನಸ್ಸಿನ ವಿಶಾಲತೆಯಲ್ಲಿ.

ಗೂಗಲ್ ಮತ್ತು ಅಲ್ಲದ್ದು

In ಯೋಚನೆ on August 26, 2007 at 11:50 am

ಹುಡುಕಾಟಕ್ಕೆ ಇನ್ನೊಂದು ಪದವೆನ್ನುವಂತಿರುವ ಗೂಗಲ್ ಏಕತಾನಕ್ಕೆ ತಿರುಗುತ್ತಿದೆ ಎಂಬ ತಲ್ಲಣ. ಆಗೊಮ್ಮೆ ಈಗೊಮ್ಮೆ ವಿಚಿತ್ರಗಳನ್ನೂ ಏಕತಾನದಲ್ಲಿ ಹೊರಗೆಡವುತ್ತಿದೆ. ಎಷ್ಟೋ ಸಲ ನಾನು ಬೇಕೆಂದು ಹುಡುಕಿದ್ದೇ ಸಿಗುತ್ತದೆ. ಅಷ್ಟೇ ಅಲ್ಲ ನನಗೆ ಇಷ್ಟವಾಗುವುದೇ ಸಿಗುವುದು ಕೂಡ ಸೋಜಿಗ ಅನಿಸುತ್ತಿಲ್ಲ.

ಗೂಗಲ್ ಹುಡುಕಾಟದ ಮೊದಲ ಪುಟದಲ್ಲಿ ಸಿಕ್ಕದೇ ಹೋಗುವ ಸಂಗತಿಗಳು, ಸಿಗಬೇಕಾದ ಎಷ್ಟೋ ಸಂಗತಿಗಳು ಈಗೀಗ ಕಾಡುತ್ತಿದೆ. ಸರ್ಚ್ ಇಂಜನ್ನಿನ ಶಕ್ತಿ ಬೆಳೆದಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ಹೆಚ್ಚು ಹೆಚ್ಚು ದಾಖಲೆಗಳನ್ನು ಅದು ಹುಡುಕುವ ಸಾಮರ್ಥ್ಯ ಬೆಳೆದಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ಸರ್ಚ್ ಇಂಜನ್ನು ಸೂಕ್ಷ್ಮವಾದಷ್ಟೂ, ನಾನು ಬರೆದ ಪದ ಸರಿಯಾಗಿದ್ದರೂ “ಹೀಗೆ” ತಿದ್ದಲೇ ಎಂದು ಸೂಚಿಸುವ ಜಾಣ್ಮೆ ಅದರಲ್ಲಿ ಕಂಡಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ನನಗೆ ಬೇಕಾದ್ದನ್ನು ಸೂಚಿಸುವ ಪದ ಟೈಪ್ ಮಾಡದೇ ಬೇರೇನೋ ಟೈಪ್ ಮಾಡಿದರೂ ನನ್ನ ಮನಸ್ಸನ್ನು ಅರಿತುಕೊಂಡು ಬೇಕಾದ್ದನ್ನೇ ನೀಡುವಷ್ಟು ನಿಖರವಾಗಿದ್ದರೂ ಯಾಕೆ ಈ ಆತಂಕ ಹೆಚ್ಚುತ್ತಿದ್ದೆ?

ಒಮ್ಮೊಮ್ಮೆ ಗೂಗಲ್ ಕಕ್ಕದೇ ಇದ್ದದ್ದು ಇಲ್ಲವೇ ಇಲ್ಲ ಎಂಬ ವಾದ ಕೇಳಿ ಮೈನಡುಗುತ್ತದೆ. ಅದು ಕಕ್ಕಿದ್ದೇ ವೇದ ವಾಕ್ಯ ಎಂಬ ವಾದವೂ ಸಹ. ಯಾವ ವಾದಕ್ಕೆ ಬೇಕಾದರೂ ಪುರಾವೆ ಸಿಕ್ಕುವ ಈ ಹುಡುಕಾಟದ ಯುಗದಲ್ಲಿ ಸಮುದ್ರ ಮಥನ ನೆನಪಾಗುತ್ತದೆ.

ಚಿಲಿಯ 9/11 ಬಗ್ಗೆ ಹುಡುಕುವುದು ಯಾಕೆ ಕಷ್ಟ? ‘other 9/11′ ಎಂದಾಗ ಅದು ಸಿಕ್ಕಿ ನೆನಪಿಸಿತು – ಈ other, ಈ ಬೇರೆ, ಈ ಅಲ್ಲದ್ದು ಎಷ್ಟು ಮುಖ್ಯ! other ಇಲ್ಲದೆ, ಬೇರೆ ಇಲ್ಲದೆ, ಅಲ್ಲದ್ದು ಇಲ್ಲದೆ this, ಇದು, ಹೌದೆನಿಸುವುದಕ್ಕೆ ಅರ್ಥವಿಲ್ಲ!

ಕಡೆಗೂ “ಸಿಕ್ಕಿಬಿಡುವುದನ್ನು” ಮೀರಬೇಕು. ಬೇಕಾದ್ದನ್ನು ಹುಡುಕುವ ತವಕ ಬಿಟ್ಟುಕೊಡಕೂಡದು. ಒಂದು ರೀತಿಯ ಮಂಜುಗಡ್ಡೆಯಂಥ ಛಲ ಹತ್ತಿಕೊಳ್ಳುತ್ತದೆ. ಮೈಯೆಲ್ಲಾ ಥರಥರ ನಡುಗಿಸುವಂಥದ್ದು ಅದು.

ಗ್ವಂಟಾನಮೋ ಪದ್ಯ

In ಪದ್ಯ on August 23, 2007 at 10:08 pm

ಪೋಯಮ್ಸ್ ಫ್ರಂ ಗ್ವಂಟಾನಮೋ: ದ ಡಿಟೈನೀಸ್ ಸ್ಪೀಕ್
ಸಂಪಾದಕ : ಮಾರ್ಕ್ ಫಾಲ್ಕಾಫ್

ಇದು ಗ್ವಂಟಾನಮೋದಲ್ಲಿನ ಹದಿನೇಳು ಸೆರೆಯಾಳುಗಳ ಇಪ್ಪತ್ತೆರಡು ಪದ್ಯಗಳ ಪುಟ್ಟ ಪುಸ್ತಕ. ಈಗಷ್ಟೇ ಪ್ರಕಟಗೊಂಡಿದೆ. ಇದರ ಸಂಪಾದಕ ಬಂಧಿತರ ಲಾಯರ್‍ನಾಗಿ ಕೆಲಸ ಮಾಡಿದಾತ. ಅವರು ಬರೆದ ಪದ್ಯಗಳನ್ನು ಕದ್ದು ಹೊರಗೆ ಜಗತ್ತಿಗೆ ತಂದಾತ. ಈಗ ಪೆಂಟಗಾನ್‌ ಒಪ್ಪಿಗೆ ಕೊಟ್ಟ ಪದ್ಯಗಳನ್ನು ಮಾತ್ರ
ಈ ಪುಸ್ತಕದಲ್ಲಿ ಪ್ರಕಟಿಸಿದ್ದಾನೆ.

ಇಷ್ಟು ವರ್ಷಗಳಲ್ಲಿ ಗ್ವಂಟಾನಮೋದ ನೀರವ ಮೌನದಿಂದ ಹೊರಬಂದಿರುವ ಒಂದೇ ದನಿ ಇದು.

ಪುಸ್ತಕದಲ್ಲಿರುವ ಈ ಒಂದು ಪದ್ಯದ ಕವಿ ಬಹರೇನಿನ 33 ವರ್ಷದ ಜಮ್ಹಾ ಅಲ್ ದೊಸರಿ. ೨೦೦೧ರಿಂದ ಗ್ವಂಟಾನಮೋದಲ್ಲಿ ಯಾವುದೇ ಕೇಸಿಲ್ಲದೆ ಸೆರೆಯಲ್ಲಿದ್ದಾನೆ. ಈತ ಹತ್ತಾರು ಬಾರಿ ಜೀವ ತೆಗೆದುಕೊಳ್ಳಲು ಪ್ರಯತ್ನಪಟ್ಟಿದ್ದಾನೆ.

ಈತನಿಗೆ ಮನೆಯಲ್ಲಿ ಪುಟ್ಟ ಹೆಣ್ಣು ಮಗಳಿದ್ದಾಳೆ. ತಂದೆ ಮಾರಣಾಂತಿಕ ಬೇನೆಯಿಂದ ಬಳಲುತ್ತಿದ್ದಾನೆ. ಸಾಯುವ ಮುಂಚೆ ಮಗನನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾನೆ.

ಅನುವಾದವನ್ನು ಬರೆದು ಹಾಕುವ ಬದಲು ಹೇಳಬೇಕು, ನೀವು ಕೇಳಬೇಕು ಅನಿಸಿದೆ.

ಈ ಕೆಳಗೆ ಕೇಳಿ ಅವನ death poem ಎಂಬ ಪುಟ್ಟ ಪದ್ಯದ ಕನ್ನಡ ರೂಪ:
http://home.exetel.com.au/anivaasi/maranapadya.mp3

ನಾನು ಹೂ?

In ಅಂದಂದು, ಯೋಚನೆ on August 21, 2007 at 11:14 pm

ನಾನು ಯಾರಾಗಿದ್ದೀನಿ?
ಇದಕ್ಕೆ ಆನ್ಸರಿಸುವ ಕೆಲಸವನ್ನು ಆಧ್ಯಾತ್ಮಿಗಳು ಹೈಜಾಕ್ ಮಾಡೋಕೆ ಬಿಡಬಾರದು. ಅವರನ್ನು ಸ್ಟಾಪ್ ಮಾಡೋಕೆ ಆಗದೇ ಇರೋದರಿಂದ ಅವರು ಗಿಣಿಪಾಟ ಒಪ್ಪಿಸೋ ಡಲ್ಲಾದ ಆನ್ಸರ್‍ಗಿಂತ ಸಕತ್ತಾದ ಆನ್ಸರ್‍ಗಳನ್ನು ನಾವೇ ಹುಡುಕೊಂಡು ಬಿಡಬೇಕು.
ಫಸ್ಟ್, ಪರ್ಸನಲ್‌ ಆಗಿ ನೋಡಿದರೆ; ನೆನ್ನೆನೋ, ಟೆನ್ ವರ್ಷದ ಮುಂಚೆನೋ ಹೇಗಿದ್ದೆ, ಹೇಗೆ ತಿಂಕ್ ಮಾಡ್ತಿದ್ದೆ, ಈಗ ಹೇಗೆ ತಿಂಕ್ ಮಾಡ್ತೀನಿ ಅಂತ ಫೈಂಡೌಟ್ ಮಾಡಿಕೊಂಡರೆ ಸೆವೆರಲ್ ವಿಷಯಗಳು ಗೊತ್ತಾಗಿ ಬಿಡಬಹುದು.
ಇನ್ನು ನಮ್ಮ ಕಮ್ಯುನಿಟಿನಲ್ಲಿ ನಾನು ಯಾರಾಗಿದ್ದೆ. ನನ್ನ ಜನರ ಜತೆ ಯಾವ ಥರ ರಿಲೇಟ್ ಮಾಡ್ಕೋತಾ ಇದ್ದೆ. ಅವರ ಹ್ಯಾಪಿನೆಸ್ಸು ವರೀಸು ಹೇಗೆ ತಿಳಿಕೋತಾ ಇದ್ದೆ, ಈಗ ಹೇಗೆ ತಿಳ್ಕೋತಾ ಇದ್ದೀನಿ ಇದು ಇಂಪಾರ್ಟೆಂಟು.
ನೆಕ್ಸ್‌ಟು-ನಮ್ಮ ಸಮಾಜದಲ್ಲಿ ನಾನು ಯಾರಾಗಿದ್ದೆ. ನಮ್ಮ ಸಮಾಜದ ಪೀಪಲ್ಸ್‌ನಲ್ಲಿ ಯಾರು ನನಗೆ ಕರೆಕ್ಟ್ ಅನ್ಸತ್ತೆ. ಯಾರು ಹೋಪ್‌ಲೆಸ್ ಅನ್ಸತ್ತೆ. ಹೀಗೇ ಬಿಫೋರೂ ಅನ್ನಿಸ್ತಾ ಇತ್ತ? ಆರ್‍, ಈಗ ಡಿಫರೆಂಟ್ ಆಗಿ ಅನ್ಸತ್ತ? ಅಂತ ನೋಡಿಕೋಬೌದು.
ಫಿನಿಷ್ ಅನ್ಕೊಂಡರ?
ಇನ್ನೊಂದೆರಡು ಸ್ಟೆಪ್ಸ್ ಇದೆ.
ನಮ್ಮ ಕಂಟ್ರಿನಲ್ಲಿ ನಾನು ಯಾರಾಗಿದ್ದೆ, ಈವಾಗ ಯಾರಾಗಿದ್ದೀನಿ? ನಮ್ಮ ನೇಷನ್‌ನ ಯಾವ ಲೇಯರ್‌ಗೆ ನಾನು ಸೇರ್‍ತಿದ್ದೆ, ಈವಾಗ ಯಾವ ಲೇಯರ್‌ಗೆ ಅಡ್ಚಸ್ಟ್ ಆಗ್ತೀನಿ? ಇದನ್ನ ನೋಡಿಕೊಂಡರೂ ಪ್ರಾಫಿಟ್ ಇದೆ.
ಫೈನಲ್ಲಾಗಿ, ವರ್ಲ್‌ಡ್‌ನ ಎಲ್ಲ ಜನರನ್ನು ಕೌಂಟಿಗೆ ತಗೊಂಡರೆ ನಾನು ಎಲ್ಲಿ ಏನು ಯಾರಾಗಿದ್ದೀನಿ? ಇದೂ ವೆರಿ ವೆರಿ ಇಂಪಾರ್ಟೆಂಟ್.
ಹೀಗೆಲ್ಲಾ ಫೈಂಡೌಟ್ ಮಾಡಿಕೊಳ್ಳೊಕೆ ಹೋದರೆ ಕನ್ಫ್ಯೂಸ್ ಆಗತ್ತೆ ಅಂತ ವರಿ ಮಾಡಿಕೊಬೇಡಿ. ಏನೂ ಆಗಲ್ಲ. ಸ್ಟೆಪ್-ಬೈ-ಸ್ಟೆಪ್ ಹೋಗಬೇಕು ಅಷ್ಟೆ.

ನಾನು ಹೂ ಆಗಿದ್ದೀನಿ? ಒಳ್ಳೆ ಕ್ವೆಸ್ಚೆನ್ ಅಲ್ವ?

ಅವತಾರ

In ನೀಲುಗಳು, ಪದ್ಯ on August 20, 2007 at 6:40 am

ಕೊಲೆಯ ಕತೆ ಹೇಳಿ ಮೈ ನಡುಗಿಸಿ
ನಡುರಾತ್ರಿ ಮಾಯವಾಗುವ ನಲ್ಲ
ಮುಂಜಾವದ ಕನಸಲ್ಲಿ ಕಾಣಿಸಿಕೊಂಡು
ನಾಚಿಕೆ ಬಿಟ್ಟು ತಬ್ಬುವುದು
ಆಕಸ್ಮಿಕವಲ್ಲ
ಅವನ ಇನ್ನೊಂದು ಮಗ್ಗುಲು ಅಷ್ಟೆ.

ಹಬ್ಬಿರುವ ಮಬ್ಬಿನೊಳಗೊಬ್ಬನೇ

In ಅಂದಂದು, ಯೋಚನೆ on August 17, 2007 at 9:44 pm

ಸಿಡ್ನಿಯಲ್ಲಿ ಚಳಿಗಾಲ ಕೊನೆಗಾಣುವ ದಿನಗಳಿವು. ಕಡೆಯ ಸಲ ತಬ್ಬಿ ಬೀಳ್ಕೊಡುವಂತೆ ಹೊರಗೆ ಮಂಜು ತಬ್ಬಿದೆ ನೆಲವ, ಮೌನ ತಬ್ಬುವ ಹಾಗೆ. ಇಲ್ಲೇಕೆ ಅಡಿಗರು ಬಂದರು ಎಂದು ಚಕಿತಗೊಳ್ಳುತ್ತೇನೆ. ಅವರ ಹಿಂದೆಯೇ ರಾಜರತ್ನಂ ಕೂಡ ಕಾಣಿಸಕೊಂಡರು ತಬ್ಬುವ ಮೋಡಿಗೆ ಮಡಕೇರಿಯಲ್ಲಿ ಮುಗ್ಧರಾಗುತ್ತಾ. ಎಲ್ಲಿ ಹೋದರೂ ಬಿಡದ ಇವರೆಲ್ಲರ ಸಾಂಗತ್ಯದ ಅದೃಷ್ಟ.
ದಟ್ಟವಾಗಿ ಮುಚ್ಚಿದ ಮಂಜಿನ ನಡುವೆ ನೆರಳುಗಳಂತೆ ಸರಿದಾಡುವ ಜನ. ನೀರವ. ಎಲ್ಲರೂ ಪಿಸುಗುಡುತ್ತಿರುವಂತೆ ಅನಿಸುತ್ತಿದೆ. ಜೋರಾಗಿ ಮಾತಾಡಿದರೆ ಎಲ್ಲಿ ಮಂಜು ಚದುರಿಬಿಡುತ್ತದೋ, ಚಳಿಗಾಲ ಓಡಿಬಿಡುತ್ತದೋ ಎಂಬ ಅಂಜಿಕೆಯೆ? ಚಳಿಗಾಲದಲ್ಲಿ ನಲಿಯುವ, ಚಳಿಯನ್ನು ಪ್ರೀತಿಸುವ ಜನರಿವರು. ಈಗೀಗ ನಾನೂ…?

ಹತ್ತಾರು ಅಡಿಗಳಾಚೆ ಏನೂ ಕಾಣದ ಮಂಜು. ರೈಲು ಬಂತೇ ಎಂದು ಬಿಳಿಯ ಗೋಡೆಯಲ್ಲಿ ಹುಡುಕುವ ಕಣ್ಣುಗಳು. ಕಣ್ಣಿಗೆ ಬೀಳುವ ಎಷ್ಟೋ ಮುಂಚೆ ರೈಲಿನ ಸದ್ದು ಎಲ್ಲರಿಗೂ ಕಚಗುಳಿಯಿಟ್ಟಾಗ ನನಗೆ ಕಾಣಿಸಿದ್ದು-
‘ಹಬ್ಬಿರುವ ಮಬ್ಬಿನೊಳಗೊಬ್ಬನೇ ಮುದುಕ
ಕೋಲೂರಿ ನಡೆದಿದ್ದಾನೆ’
ಗಾಂಧಿ ಶತಮಾನೋತ್ಸವದಲ್ಲಿ ಶಿವರುದ್ರಪ್ಪ ಬಂದಾಡುತ್ತಾರೆ. ಗಾಂಧಿ ಕತ್ತಲೆಯಲ್ಲಿ ಧಡಗುಟ್ಟಿ ಬರುವ ರೈಲಿನ ಹಾಗೆ, ಬಂದು ಹಾಗೇ ಕತ್ತಲಲ್ಲಿ ಲೀನವಾಗುವ ಹಾಗೆ ಎಂದಿದ್ದಾರಲ್ಲವೆ? ಸಾಲುಗಳು ನೆನಪಿಲ್ಲ. ಆದರೆ ಪ್ರತಿಮೆ ತಲೆಯಲ್ಲಿ ಸುಳಿದಾಡುತ್ತದೆ.

ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಆಸ್ಟ್ರೇಲಿಯಾದ ಆದಿನಿವಾಸಿಗಳು ಗಾಂಧಿಯ ಬಗ್ಗೆ ಚಿಂತಿಸಿದ್ದರಂತೆ. ಬ್ರಿಟೀಷರ ಎದುರು ಗಾಂಧಿಯ ಪ್ರತಿರೋಧ, ಚಳವಳಿಗಳು ತಮಗೂ ಮಾದರಿಯಾಗಬಲ್ಲವೆ ಎಂದು ಚರ್ಚಿಸಿದ್ದರಂತೆ. ಅದರ ಬಗ್ಗೆ ಇನ್ನಷ್ಟು ಓದಬೇಕು ಎಂದು ಮನಸ್ಸಿನ ಮೂಲೆಯಲ್ಲಿ ಒಂದು ಪುಟ್ಟ ಗುರುತು ಹಾಕಿಕೊಳ್ಳುತ್ತೇನೆ. ಅಂದಿಗೂ-ಇಂದಿಗೂ, ಅಲ್ಲಿಗೂ-ಇಲ್ಲಿಗೂ ಕೊಂಡಿ ಹುಡುಕುವುದು, ಅಂದಿಗೂ-ಇಂದಿಗೂ-ಅಲ್ಲಿಗೂ-ಇಲ್ಲಿಗೂ ಸಲ್ಲುವ ಒಂದು ದಾರಿ ಅನಿಸುತ್ತದೆ. ಅರವತ್ತರ ದಶಕದ ಅಬಾರಿಜಿನಗಳ “freedom ride”, ನಂತರ ಅವರಿಗೆ ಸಿಕ್ಕ ಓಟಿನ ಹಕ್ಕು, ಅಬಾರಿಜಿನಿ ಸಮುದಾಯದ ಬದುಕನ್ನು ಚೆನ್ನಾಯಿಸಿತೆ? ಗಾಂಧಿ ನಮಗಿಂದು ಎಷ್ಟು ದಕ್ಕುತ್ತಾರೆ? ದಕ್ಕಲೇಬೇಕೆ?

ಇನ್ನೂ ಮಂಜು ಚದುರಿಲ್ಲ. ಆದರೂ ಹಕ್ಕಿಗಳಿಗೆ “ಋತುಗಳ ರಾಜ ವಸಂತ” ಬರುತ್ತಿದ್ದಾನೆ ಎಂದು ಗೊತ್ತಾಗಿಬಿಟ್ಟಿದೆ. (ಯಾರದು-ಬಿಎಂಶ್ರಿ-ಅನುವಾದ?).

ಮರಿಹಕ್ಕಿಗಳು ಎಡೆಬಿಡದೆ ಚಿಲಿಪಿಲಿ ಅನ್ನುತ್ತಲೇ ಇವೆ.

ಎಲ್ಲಿಯ ಯಾವ ವಾಸನೆ ತಟ್ಟಿ ಎಬ್ಬಿಸಿದೆ ಅವನ್ನು?

ಹೂತಿದ್ದು

In ನೀಲುಗಳು, ಪದ್ಯ on August 16, 2007 at 10:26 pm

ಸಂದಣಿಯಲ್ಲೆಲ್ಲೋ
ಅಕಸ್ಮಾತ್ ಕಿವಿಗೆ ಬಿದ್ದ
ಯಾರದೋ ತುಂಡು ಮಾತು
ಹತ್ತಾರು ವರ್ಷದ ಮೇಲೆ ಧಿಗ್ಗನೆ ಅರ್ಥ ಹೊಳೆಸಿ
ದಿನವಹಿ ಮಾತುಗಳನ್ನು
ಕರುಣೆಯಲ್ಲಿ ತೊಳೆಯುತ್ತದೆ.

ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

In ಅಂದಂದು on August 14, 2007 at 10:19 pm

ia2007

ಭಾನುವಾರ ಆಗಸ್ಟ್ ೧೨, ಸಿಡ್ನಿಯ ಒಲಂಪಿಕ್ ಅಥ್ಲೆಟಿಕ್ ಸೆಂಟರ್‌ನಲ್ಲಿ ಇಂಡಿಯಾದ ಅರವತ್ತನೇ ವರ್ಷದ ಸ್ವಾತಂತ್ಯ್ರ ಉತ್ಸವ. ಇದು ಭಾರತದ ಹೊರಗೆ ನಡೆಯೋ ಸ್ವಾತಂತ್ಯ್ರ ಉತ್ಸವಗಳಲ್ಲಿ ಅತಿ ದೊಡ್ಡದಂತೆ. ಹತ್ತಾರು ಸಾವಿರ ಜನ ಇಂಡಿಯಾದವರು ಸೇರತಾರೆ.

dsc_0321.jpg

ದಿನವಿಡೀ ಹಾಡು ಕುಣಿತ ಊಟ ತಿಂಡಿ ಜಾತ್ರೆ. ಇದರ ನಡುವೆ ಆಸ್ಟ್ರೇಲಿಯಾದ ಕೆಲವು ರಾಜಕಾರಣಿಗಳನ್ನ ಕರೆಸಿ ಬೆನ್ನು ತಟ್ಟಿಸಿಕೊಳ್ಳೋ ಬೇಜವಾಬ್ದಾರಿತನ ನಮ್ಮ ಸೂಟುಧಾರಿ ಇಂಡಿಯನ್ “ಎಂಟರ್‌ಪ್ರೆನರ್ಸ್‌”ಗಳಿಗೆ. ಹಲ್ಲುಗಿಂಜಿಕೊಂಡು ಅವರ ಜತೆ “ಸಭ್ಯತೆಯ ಲಂಚ್” ಬೇರೆ.

dsc_0344.jpg

ಅವರೆಲ್ಲಾ ಭಾಷಣದ ಬೊಗಳೆ ಮುಗಿಸಿ “ಸಭ್ಯತೆಯ ಲಂಚ್”ಗೆ ತೊಲಗತ್ತಲೂ, ಕನ್ನಡದವರು ನಾವು ಕೆಲವರು “ಈ ಮಣ್ಣು ನಮ್ಮದು, ಈ ಗಾಳಿ ನಮ್ಮದು” ಅನ್ನೋ ದೊಡ್ಡರಂಗೇಗೌಡರ ಹಾಡು ಹಾಡಿದೆವು. (ಯಾವ ಮಣ್ಣು-ಯಾವ ಗಾಳಿ ಅಂತ ಗೊಂದಲ ಇದೆ ಬಿಡಿ!)

cheluvayya_cheluvo.jpg

ಆಮೇಲೆ ಕನ್ನಡದ ಪುಟ್ಟ ಪುಟ್ಟ ಮಕ್ಕಳು ಹುರುಪಿನಿಂದ “ಚಲುವಯ್ಯ ಚಲವೋ” ಹಾಡಿಗೆ ಕುಣಿದರು.

dsc_0367.jpg

ಅಲ್ಲದೆ, ತಮಿಳರು, ತೆಲುಗರು, ಹಿಂದಿಯವರು, ಪಂಜಾಬಿಗಳು, ಮಲಯಾಳಿಗಳು, ಮರಾಟಿಗರು, ಬಂಗಾಳಿಗಳು, ಎಲ್ರೂ ಅವರ ಅವರ ಹಾಡು ಹಾಕಿಕೊಂಡು/ಹೇಳಿಕೊಂಡು ಕುಣಿದರು.

dsc_0388.jpg

ಇನ್ನೊಂದು ಕಡೆ ನಾವು ಸಿಕ್ಕ ಸಿಕ್ಕ ಕನ್ನಡದವರಿಗೆಲ್ಲಾ ಜೋಕುಮಾರಸ್ವಾಮಿ ಮತ್ತೆ ಆಡ್ತಾ ಇದ್ದೀವಿ ಬನ್ನಿ ಅಂತ ಹೇಳ್ಕೊಂಡು ತಿರುಗತಾ ಇದ್ದಿವಿ. ಆವಾಗ ಆಸ್ಟ್ರೇಲಿಯಾದ ಪ್ರಧಾನಿ ಜಾನ್ ಹವಾರ್ಡ್‌ ಅನ್ನೋ ಧೂರ್ತನ್ನ ಅವನ ಕ್ಷೇತ್ರದಲ್ಲೇ ಸೋಲಿಸೋ ಹಾಗೆ ಕಾಣೋ, ತನ್ನ ಟಿವಿ ಪ್ರೆಸೆಂಟರ್‍ ಕೆಲಸ ಬಿಟ್ಟು ಎಲೆಕ್ಷನ್‌ಗೆ ನಿಂತಿರೋ ದಿಟ್ಟ ಹೆಂಗಸು ಮಾಕ್ಸೀನ್ ಮೆಕ್ಯೂ ಬಂದು ನಮ್ಮ ಜತೆ ಮಾತಾಡಿದಳು. ಅವಳ ಬಗ್ಗೆ ನಮಗೆ ಸ್ವಲ್ಪ ಜಾಸ್ತೀನೆ ಪ್ರೀತಿ. ಮುಂದೆ ಅವಳಿಗೆ ಆ ಪ್ರೀತಿಯ ಭಾರ ಹೊರಕ್ಕಾಗದೇ ಇರಬಹುದು ಅನ್ನೋ ಎಚ್ಚರಿಕೇನೂ ಇದೆ. ಜೋಕುಮಾರಸ್ವಾಮಿ ನಾಟಕಕ್ಕೆ “ನೀನೂ ಬಾ, ನಿನ್ನ ಸಂಗಾತಿಗಳಿಗೂ ಹೇಳು” ಅಂತ ಚೀಟಿ ಕೊಟ್ಟು ಕರೆದವು. ಅವಳ ಹಿಂದೆ ಟೀವಿ ಕ್ಯಾಮೆರಾಗಳು ಇದ್ದವು. ಅವಳು ಯಾವುದಾದರೂ ಹಾಡು ಹೇಳಿ ಅಂದಳು. ತಕ್ಕೊ ಅಂತ “ಶರಣು ಹೇಳೇವ್ರಿ” ಹಾಡನ್ನು ಹಾಡಿದವು. ಅದು ಆವತ್ತು ಸಂಜೆ ಟೀವಿ ನ್ಯೂಸಲ್ಲೆಲ್ಲಾ ಮರುದಿನ ಪೇಪರಲ್ಲಿ ಬಂದದ್ದು ನೀವು ಇಲ್ಲಿ ನೋಡಬಹುದು.

Sydney Morning Herald ನಲ್ಲಿ
ಸಂಜೆ ಟಿವಿ ಸುದ್ದಿಯಲ್ಲಿ

ವಲಸೆ

In ಅಂದಂದು, ಯೋಚನೆ on August 13, 2007 at 7:04 am

ಎರಡು ತರ ಖುಷಿ ಇದೆ. ಎರಡೂ ಪ್ರಶ್ನೆಗಳಿಂದ ಹುಟ್ಟೋ ಖುಷಿ. ಪ್ರಶ್ನೆಗಳಲ್ಲೇ ನಿಂತು ಹೋಗೋ ಖುಷಿ. ಯಾಕೆಂದರೆ ಉತ್ತರದಲ್ಲಿ ವಿವರಣೆ ಇದೆ, ಆದರೆ ಖುಷಿ ಇಲ್ಲ. ಪ್ರಶ್ನೆಗಿಂತ ಉತ್ತರ ವಿಪರೀತ ಬೋರಿಂಗ್.
ಮೊದಲನೇ ಪ್ರಶ್ನೆ – ನೀನು ಈ ದೇಶದಲ್ಲೇ ಹುಟ್ಟಿದ್ದ? ಪ್ರಶ್ನೆ ಹಿಂದಿನ ಯೋಚನೆ ಗಮನಿಸಿ. ನುಡಿ, ನಡೆವಳಿಕೆ, ತಿಳವಳಿಕೆ ಇದೆಲ್ಲದರ ಮೇಲೆ ಅವರ ತೀರ್ಪು ಈ ಪ್ರಶ್ನೆ ರೂಪದಲ್ಲಿ ಧುತ್ತಂತ ಎದುರಾಗತ್ತೆ. ಈ ದೇಶದಲ್ಲಿ ಹುಟ್ಟದೇ ಇರೋನಿಗೆ ಅದು ರಾಜಕೀಯವಾದ ಪ್ರಶ್ನೆನೂ ಆಗಬಹುದು. ಉತ್ತರ ಕೊಡೋಕೆ ಇಷ್ಟ ಇಲ್ಲದೇ ಇರೋ ಪ್ರಶ್ನೆನೂ ಆಗಬಹುದು. ಅದೇನೇ ಆದರೂ ಈ ಪ್ರಶ್ನೆ, ಮತ್ತು ಉತ್ತರದ ಅಪೇಕ್ಷೆಯ ಸಂವಾದದಲ್ಲಿ ಒಂದು ಬಗೆಯ ಖುಷಿಯಿದೆ, ಮಜಾಯಿದೆ.

ಎರಡನೇದು – ನೀನು ಈ ದೇಶಕ್ಕೆ ಬಂದು ಎಷ್ಟು ದಿನ ಆಯಿತು? ಇದು “ನೀನು ಈ ದೇಶದಲ್ಲೇ ಹುಟ್ಟಿದ್ದ?” ಅನ್ನೋದಕ್ಕಿಂತ ಸಕ್ಕತ್ ಖುಷಿ ಕೊಡೋ ಪ್ರಶ್ನೆ. ಬೇಜಾನ್ ಒಳತಿರುವುಗಳಿರೋ ಪ್ರಶ್ನೆ. ಏಕ್‌ದಂ ಉತ್ತರಕೊಡೋ ಬದಲು ಪ್ರಶ್ನೆಗೊಂದು ಪ್ರಶ್ನೆ ಎಸೀಲಾ ಅಂತ ಇರಾದೆ ಹುಟ್ಟಿಕೊಳ್ಳತ್ತೆ. ಆ ಇರಾದೆ ತೋರಿಸಿಕೊಳ್ಳೋದು ಕುಚೋದ್ಯವಾಗಿ. “ದಿನಗಳಲ್ಲಿ ಬೇಕಾ ಗಂಟೆಗಳಲ್ಲಿ ಬೇಕಾ” ಅಂತ ಕೇಳೋದಕ್ಕೆ ಒಂದರೆ ಕ್ಷಣ ಯೋಚನೆ ಮಾಡ್ತೀನಿ. ಇದ್ದಕ್ಕಿದ್ದ ಹಾಗೆ ಅಷ್ಟೊಂದು ರಾಜಕೀಯ ಯಾಕೆ ಅಂತ ಮುಚ್ಕೋತೀನಿ. ಆದರೂ ನಾನು ಕಟ್ಟಿಕೊಂಡು ಬಂದಿದ್ದು ಇನ್ನೂ ಕಾಣತಲ್ಲ ಅಂತ ತಕತಕ ಕುಣೀತೀನಿ.

ಉತ್ತರ ಮಾತ್ರ ವಿಪರೀತ ಬೋರಿಂಗ್ ಅಂದೆ ಆಲ್ಲವ? ಏನಾದರೂ ಮಾಡಿ ಆಸಕ್ತಿ ಹುಟ್ಟಿಸಬೇಕು ಅಂತ ಶುರು ಮಾಡ್ತೀನಿ:
“ನಾನು ಎಲ್ಲಿ ಹುಟ್ಟಿದ್ದೋ ಗೊತ್ತಿಲ್ಲ. ಹಸುಳೆ ಆಗಿದ್ದಾಗ ಯಾರೋ ಧೂರ್ತ ರಾಜನ ಕಾಟ ತಡೆಯೋಕೆ ಆಗದೆ ನನ್ನ ಅಪ್ಪ-ಅಮ್ಮ ರಾತ್ರೋ ರಾತ್ರಿ ಪುಟ್ಟ ದೋಣೀಲಿ ತಪ್ಪಿಸಿಕೊಂಡರಂತೆ. ಅದು ಬಿರುಗಾಳಿಗೆ ಸಿಕ್ಕಿ ಮುಳುಗೋ ಹಾಗೆ ಆಗಿತ್ತಂತೆ. ಆವಾಗ ದೂರದಲ್ಲಿ ಒಂದು ಸುಭಿಕ್ಷ ದೇಶ ಕಾಣಿಸ್ತಂತೆ. ಆದರೆ ಹತ್ತಿರ ಹೋಗುತ್ತಲೂ, ಆ ದೇಶದ ದೊಡ್ಡ ಹಡಗು ನಮ್ಮ ದೋಣೀನ ಕಾಪಾಡೋದು ಬಿಟ್ಟು, ಅವರ ರಾಜನ ಅಪ್ಪಣೆ ಮೇರೆಗೆ, ದೊಡ್ಡ ಕೋಲಿಂದ ‘ಬರಬೇಡಿ ಹೋಗಿ’ ಅಂತ ದೂರಕ್ಕೆ ತಳ್ಳಿದರಂತೆ. ಆ ದೇಶದ ಹಡಗು ಅತ್ತಲಾಗಿ ಹೋಗುತ್ತಲೂ ನಮ್ಮ ದೋಣಿ ಮುಳುಗಿ ಹೋಯ್ತಂತೆ. ಅದಕ್ಕೆ ನನ್ನ ಅಪ್ಪ-ಅಮ್ಮನ ಮುಖ ನಾನು ನೋಡೇ ಇಲ್ಲ. ನಾನು ಸೊಳ್ಳೆ ಪರದೆ ಗಂಟಿನ ಮೇಲೆ ತೇಲಿಕೊಂಡು ಆ ಸುಭಿಕ್ಷ ನಾಡಿನ ಚಿನ್ನದಂಥ ಕಡಲತಡೀಲಿ ಯಾರದೋ ಕೈಗೆ ಸಿಕ್ಕನಂತೆ. ಅವರು ಮೊದಲು ಯಾವುದೋ ಪ್ರಾಣಿ ಅಂತ ನನ್ನನ್ನ ಮುಟ್ಟೋಕೂ ಹೆದರಿಕೊಂಡು ಆಮೇಲೆ ಮನಸ್ಸು ಬದಲಾಯಿಸಿ ಮನೆ ಒಳಗೆ ಇಟ್ಟಕೊಂಡು ಪ್ರೀತಿಯಿಂದ ಸಾಕಿದರಂತೆ. ಒಂದು ಚೂರು ದೊಡ್ಡೋನಾಗತಲೂ ಕಟ್ಟಿಹಾಕೋ ಅವರ ಪ್ರೀತಿಯಿಂದ ತಪ್ಪಿಸಿಕೊಂಡು ಮತ್ತೆ ನನ್ನ ನಾಡಿಗೆ ಓಡಿ ಹೋಗಿ ದೊಡ್ಡೋನಾದ ಮೇಲೆ ಈಗಷ್ಟೆ ಬಂದು ಇಲ್ಲಿ ಇಳಿದೆ.”

ನನ್ನ ತಲೆ ಸಾವಿರ ಹೋಳಾಗದೆ ಇರೋದು ಆಶ್ಚರ್ಯ ಅಲ್ಲ ಅಲ್ಲವೆ?

ತೊಡಕು

In ಅಂದಂದು, ಯೋಚನೆ on August 10, 2007 at 12:26 pm

ಇದ್ದಕಿದ್ದ ಹಾಗೆ ಬಣ್ಣದ ಪಲ್ಯ ಮಾಡೋಣ ಅಂತ ಮನಸಾಯಿತು. ಬಾಣಲಿಯಲ್ಲಿ ಒಂದಷ್ಟು ಬಣ್ಣ ಉದುರಿಸಿ, ತಟಕ್ಕು ಎಣೆ ಹಾಕಿ ಹುರಿಯೋಕೆ ಶುರು ಮಾಡಿದೆ. ಹುರಿದಾಗ ಬಣ್ಣಗಳೆಲ್ಲಾ ಒಂದೇ ರೀತಿ ಆಗಲ್ಲ. ಒಂದೊಂದು ಬಣ್ಣ ಒಂದೊಂದು ರೂಪ ರಾದ್ಧಾಂತ ಮಾಡ್ಕೋತಾವೆ. ಕೆಲವು ಮುರುಟಿಕೊಂಡರೆ ಕೆಲವು ಅರಳಕೋತಾವೆ. ಕೆಲವು ಹರಡಿಕೊಂಡರೆ ಇನ್ನು ಕೆಲವು ಸುರಟಿಕೋತಾವೆ. ಒಟ್ಟಿನಲ್ಲಿ ಏನೋ ಒಂದು ಹದ ಅಂತೂ ಇರತ್ತೆ. ಮುರುಟಿಕೊಂಡಿದ್ದು ಅರಳಿಕೊಂಡಿದ್ದು ಪಕ್ಕಪಕ್ಕದಲ್ಲಿ ಬಿದ್ದುಕೊಂಡು ಕಷ್ಟಸುಖ ಮಾತಾಡಿಕೋತಾ ಇರೋದು ನೋಡೋಕೆ ತುಂಬಾ ಚೆನ್ನಾಗಿರತ್ತೆ. ಕೆಲವು ಬಣ್ಣಗಳು ಬದಲಾಗ್ತಾ ಬಿಳಿಯಾಗ್ತಾವೆ, ಇನ್ನು ಕೆಲವು ಕಪ್ಪಾಗ್ತಾವೆ. ಆದರೆ ಮಜಕೊಡೋದು ಯಾವುದು ಗೊತ್ತಾ? ಹುರೀತಾ ಹುರೀತಾ ದಟ್ಟವಾಗ್ತಾ ಹೋಗವು.
ಆದರೂ ಬಾಣಲಿಯ ಬಣ್ಣದ ಪಲ್ಯದಲ್ಲಿ ಯಾಕೋ ಏನೋ ಸರಿಯಿಲ್ಲ ಅನ್ನಿಸಿ ಏನಿರಬಹುದು ಅಂತ ಯೋಚಿಸ್ತಾ ಬಾಣಲೀನ ದಿಟ್ಟಿಸ್ತಾ ಹುರೀತಿದ್ದೆ. ಇನ್ನು ಹೆಚ್ಚು ಹುರಿದರೆ ಕೆಟ್ಟು ಹೋಗತ್ತೆ ಅಂತ ಬೇರೆ ಚಿಂತೆ ಹತ್ತಿಕೋತು. ಹುರಿಯೋದು ಸಾಕು ಅನ್ನಿಸಿದರೂ ಇನ್ನೇನೋ ಒಂದು ಬಣ್ಣ ಕಡಿಮೆ ಆಗಿದೆ ಅಂತ ಒಳಗೊಳಗೇ ಒದ್ದಾಡ್ತಿದ್ದೆ. ನೀಲಿ ಇರಬಹುದ ಅಂತ ಹೊರಗಿನ ಆಕಾಶ ನೋಡಿದೆ. ಹಸಿರು ಇರಬಹುದ ಅಂತ ದೂರದ ಹುಲ್ಲುಗಾವಲು ನೋಡಿದೆ. ಕೆಂಪು ಇರಬಹುದಾ ಅಂತ ಉರೀತಿದ್ದ ಸೂರ್ಯನ್ನ ನೋಡಿದೆ. ಹಳದಿ ಇರಬಹುದ ಅಂತ ಉದುರಿ ಕೊಳೀತಿದ್ದ ಎಲೆಗಳ ರಾಶೀನ ನೋಡಿದೆ. ಇಷ್ಟೆಲ್ಲಾ ಮೇಲೆ ಕೆಳಗೆ, ಒಳಗೆ ಹೊರಗೆ ನೋಡ್ತಾ ನೋಡ್ತಾ ಆನಂದವಾಗಿರೋವಾಗ ಬಾಣಲಿ ಒಳಗಿದ್ದ ಬಣ್ಣಗಳು ತಮ್ಮನ್ನು ತಾವೇ ಮರೆತು ಒಂದೇ ಬಿಳಿ ಇಲ್ಲ ಕಪ್ಪು ಆಗಿ ನನ್ನನ್ನೇ ಮಿಕಮಿಕ ನೋಡ್ತಿದ್ವು. ಅದಕ್ಕೇ ಒಗ್ಗರಣೆ ಹಾಕಿ ಹೊಡದು ಬಿಡೋಣ ಅಂತ ಆಸೆ ಆದರೂ, ಮಾಡೋಕೆ ಹೊರಟಿದ್ದು ಇದು ಅಲ್ವಲ್ಲ ಅಂತ ತಬ್ಬಿಬ್ಬಾಗಿ ನಿಂತೆ.

ಇದು ನಡೆದು ಎಷ್ಟೋ ವರ್ಷ ಆಗಿದ್ದರೂ ಈವತ್ತಿಗೂ ಸರಿಯಾದ ಬಣ್ಣ ಬಳಸದೇ ಮಾಡಿದ ಪಲ್ಯ ಗಂಟಲಲ್ಲಿ ಇಳಿಯೋಲ್ಲ. ಹಾಗೇನೆ ಕಪ್ಪೋ ಬಿಳಿಯೋ ಆಗಿಬಿಟ್ಟ ಪಲ್ಯ ಕಂಡರೆ ಮೈ ಝುಮ್ಮನ್ನತೆ.

ಎಷ್ಟೋ ಜನ ಕಿವಿನಲ್ಲಿ ಪಿಸುಗುಟ್ಟಿದ್ದಾರೆ- ಯಾಕೆ ಸುಮ್ಮನೆ ಬಣ್ಣದ ಬಗ್ಗೆ ತಲೆ ಕೆಡಿಸ್ಕೋತೀಯ, ಕಪ್ಪೋ ಬಿಳೀನೋ ಮೂಡಿಗೆ ಸರಿಯಾಗಿ ಯಾವುದು ಹೊಂದತ್ತೋ ತಿಂದು ಬಿಡು, ಬಂದವರಿಗೆ ಬಡಿಸಿಬಿಡು ಅಂತ.

ನಾನೂ ಅವರ ಕಿವಿನಲ್ಲಿ ಪಿಸುಗುಡಿತೀನಿ- ಬಣ್ಣ ಒತ್ತು ಕಳಕೊಂಡು ಬಣ ಕಟ್ಟಿಕೊಂಡರೆ ಎಲ್ಲ ಬಣಬಣ ಅಂತ.

ಅವರು ಉಂಡಿದ್ದು ಉಗುಳೋದೋ ಬೇಡವೋ ಅಂತ ಮುಖಮುಖ ನೋಡತಾರೆ.

ಮುಕ್ತಾಯ

In ನೀಲುಗಳು, ಪದ್ಯ on August 7, 2007 at 10:31 pm

“ಕಾಲಚಕ್ರ ಉರುಳಿದಂತೆ
ಬದುಕಲ್ಲಿ ಬಂದದ್ದು ಹೋಗುತ್ತದೆ,
ಹೋದದ್ದು ಬರುತ್ತದೆ”
ಎಂಬ ಅವನ ಉಪದೇಶ ಕೇಳಿ
-”ಆ ಚಕ್ರದ ನಡು ಎಲ್ಲಿದೆ?”
-”ಯೌವ್ವನ ಯಾವಾಗ ಮರಳತ್ತೆ?”
ಎಂದೆಲ್ಲಾ ಅವನನ್ನು ಮುದ್ದಿಸಿ
ಚರ್ಚೆಯನ್ನೇ ನಾಚಿಸಿಬಿಟ್ಟಳು ತುಂಟಿ.

ಬರ್ಗ್‌ಮನ್‌ನ ‘ವಿಂಟರ್‍ ಲೈಟ್’

In ಅಂದಂದು, ಚಲನಚಿತ್ರ on August 5, 2007 at 12:33 pm

ಬರ್ಗ್‌ಮನ್ ತೀರಿಕೊಂಡ ಸುದ್ದಿ ಕೇಳಿ ಅವನ ವಿಂಟರ್‌ಲೈಟ್ ಮತ್ತೆ ನೋಡಿದೆ. ೮೧ ನಿಮಿಷದ ಅವಧಿಯ ಚಿತ್ರ. ವಾಸ್ತವ ಜಗತ್ತಿನ ಮೂರು ಗಂಟೆಗಳಲ್ಲಿ ತೆರೆದುಕೊಳ್ಳುವ ಪಾತ್ರಗಳು, ಮಾನಸಿಕ ಹೊಯ್ದಾಟ, ಧಾರ್ಮಿಕವಲ್ಲದ ಧರ್ಮದ ಬಗೆಗಿನ ಚಿಂತನೆ, ನೋವು ಮತ್ತು ನರಳಾಟದ ಬಗೆಗಿನ ಒಳನೋಟ ನಮ್ಮನ್ನು ಹಿಡಿದಿಡುತ್ತದೆ.

ನಾಕು ವರ್ಷದ ಹಿಂದೆ ಹೆಂಡತಿ ಕಳೆದುಕೊಂಡ ಸಣ್ಣ ಊರೊಂದರ ಪಾದ್ರಿ. ತನ್ನನ್ನು ಮದುವೆಯಾಗೆಂದು ಪೀಡಿಸುವ ಶಾಲಾ ಶಿಕ್ಷಕಿಯಾದ ಅವನ ಗೆಳತಿ. ಜಗತ್ತಿನ ಕರಾಳ ವಿದ್ಯಮಾನಗಳ ಬಗ್ಗೆ ಕಂಗೆಟ್ಟಿರುವ ಸೈನಿಕ ಮತ್ತು ಅವನ ಬಸುರಿ ಹೆಂಡತಿ. ಬೆನ್ನು ನೋವಿಂದ ನರಳುವ, ನಿದ್ದೆ ಬಾರದೆ, ಸದಾ ಮದ್ದಿನ ಮೇಲೆ ಬದುಕಿರುವ ಗೂನು ಬೆನ್ನಿನ ಚರ್ಚಿನ ಸಹಾಯಕ. ಹಗುರ ಮನೋಭಾವದ ಚರ್ಚಿನ ಪಿಯಾನೋ ವಾದಕ. ಇಷ್ಟೇ ವಿಂಟರ್‌ಲೈಟ್ ಚಿತ್ರದ ಜಗತ್ತಿನ ಪಾತ್ರಗಳು.

ಹಿಮ ಮುಚ್ಚಿದ ಚಳಿಗಾಲದ ಒಂದು ಮಧ್ಯಾಹ್ನ-ಸಂಜೆ ನಡುವಿನ ಹೊತ್ತು. ತನ್ನ ಚರ್ಚಿನ ಸೇವೆ ಮುಗಿಸುವಲ್ಲಿಂದ ಮೂರು ಗಂಟೆಯ ನಂತರವಿರುವ ಇನ್ನೊಂದು ಚರ್ಚಿನ ಸೇವೆಯ ನಡುವೆ ನಡೆಯುವ ಘಟನೆಗಳು ಈ ಚಿತ್ರದ ಬಿತ್ತರ.

ಸಣ್ಣ ಅನಾರೋಗ್ಯದಿಂದ ಬಳಲುತ್ತಿರುವ ಪಾದ್ರಿಗೆ ಗೆಳತಿಯ ಪತ್ರ ಓದಲು ಬಿಡುವಿಲ್ಲ. ಆಗ ಮಾತನ್ನೇ ಆಡದ ಸೈನಿಕ ಮತ್ತು ಅವನ ಆಂತರಿಕ ಹಿಂಸೆಯನ್ನು ಹೋಗಲಾಡಿಸಲು ಹವಣಿಸುತ್ತಿರುವ ಅವನ ಹೆಂಡತಿ ಪಾದ್ರಿಯನ್ನು ಭೇಟಿಮಾಡುತ್ತಾರೆ. ತನ್ನ ಗಂಡನೊಡನೆ ಮಾತಾಡಿ ಅವನ ವೇದನೆಯನ್ನು ಕಡಿಮೆ ಮಾಡಬೇಕೆಂದು ಸೈನಿಕನ ಬಸುರಿ ಹೆಂಡತಿ ಕೇಳಿಕೊಳ್ಳುತ್ತಾಳೆ. ಪಾದ್ರಿ ಒಂದು ಗಂಟೆ ಬಿಟ್ಟು ಬರುವಂತೆ ಹೇಳುತ್ತಾನೆ.

ಆ ಒಂದು ಗಂಟೆಯಲ್ಲಿ ಗೆಳತಿಯ ಪತ್ರ ಓದುತ್ತಾನೆ. ನಂತರ ಬಂದ ಸೈನಿಕನಿಗೆ ಸಾಂತ್ವನ ಹೇಳಬೇಕಾದವನು ತನ್ನ ಒಳಗನ್ನು ಅವನ ಮುಂದೆ ಸುರಿದುಕೊಳ್ಳುತ್ತಾನೆ. ಮದುವೆಯಾಗೆಂದು ಈ ಹಿಂದೆ ಪೀಡಿಸುತ್ತಿದ್ದ ಗೆಳತಿ ಅವಳ ಶಾಲೆಯ ಕೋಣೆಯಲ್ಲಿ ಪಾದ್ರಿಗೆ ಮುಖಾಮುಖಿಯಾಗುತ್ತಾಳೆ. ಪಾದ್ರಿ ಅವಳನ್ನು ತಾನೇಕೆ ಮದುವೆಯಾಗಲಾರೆ ಎಂದು ಹೇಳಿಕೊಳ್ಳುತ್ತಾನೆ. ಅವಳ ಸ್ವಭಾವವನ್ನು ಎತ್ತಾಡಿ ಹಳಿಯುತ್ತಾನೆ. ಅಷ್ಟರಲ್ಲಿ ಸೈನಿಕ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಪಾದ್ರಿಯೇ ಹೋಗಿ ಸೈನಿಕನ ಬಸುರಿ ಹೆಂಡತಿಗೆ ಅವಳ ಗಂಡ ಜೀವ ತೆಗೆದುಕೊಂಡ ಸುದ್ದಿ ಮುಟ್ಟಿಸುತ್ತಾನೆ.

ಪಾದ್ರಿಯ ಗೆಳತಿ ಅವನನ್ನು ಮತ್ತೊಂದು ಚರ್ಚಿಗೆ ಕರೆದುಕೊಂಡು ಹೋಗುತ್ತಾಳೆ. ಒಂದು ರೈಲ್ವೆ ಕ್ರಾಸಿಂಗಿನಲ್ಲಿ ಒಂದು ಕ್ಷಣ ಕಾಯುವಾಗ ತಾನು ಪಾದ್ರಿಯಾಗಬೇಕೆಂದು ತನ್ನ ತಂದೆಯ ಕನಸಾಗಿತ್ತು ಎನ್ನುತ್ತಾನೆ. ಹೆಣದ ಪೆಟ್ಟಿಗೆಗಳಂಥ ಗೂಡ್ಸ್ ಗಾಡಿ ಹಾದು ಹೋಗುತ್ತದೆ.

ಗೂನು ಬೆನ್ನಿನ, ನೋವಿನಿಂದ ನರಳುತ್ತಿರುವ ಪಾದ್ರಿಯ ಸಹಾಯಕ ಜೀಸಸ್ಸಿನ ನರಳಾಟದ ಬಗ್ಗೆ ತನ್ನ ವ್ಯಾಖ್ಯೆಯನ್ನು ಕೊಡುತ್ತಾನೆ. ತಾನು ಅನುಭವಿಸುತ್ತಿರುವ ವೇದನೆಯ ಮುಂದೆ ಜೀಸಸನ ಹಿಂಸೆ ಹೆಚ್ಚೇನೂ ಅಲ್ಲ ಎಂದು ನಮ್ರತೆಯಿಂದ ಹೇಳುತ್ತಾನೆ. ಆದರೆ, ಕಡೆ ಗಳಿಗೆಯಲ್ಲಿ ಜೀಸಸ್ಸಿಗೆ ತನ್ನ ದೇವರ ಬಗ್ಗೆ ಹುಟ್ಟಿದ ಅನುಮಾನ ತಂದಿರಬಹುದಾದ ನೋವು ದೈಹಿಕ ನೋವು ಹಿಂಸೆಗಿಂತ ಅತ್ಯಂತ ತೀವ್ರವಲ್ಲವೆ ಎಂದು ಕೇಳುತ್ತಾನೆ.

ಪಾದ್ರಿ ಮತ್ತೆ ಸ್ಥಿಮಿತ ಕಂಡುಕೊಂಡವನಂತೆ ಭದ್ರ ಧ್ವನಿಯಲ್ಲಿ ಚರ್ಚ್ ಸೇವೆ ಶುರುಮಾಡುತ್ತಾನೆ. ಅವನ ಗೆಳತಿ ಅವನ ಪ್ರವಚನ ಕೇಳಲು ಹಿಂದಿನ ಸಾಲಲ್ಲಿ ಕೂತಿದ್ದಾಳೆ.

ಬರ್ಗ್‌ಮನ್‌ನ ವಿಂಟರ್‌ಲೈಟ್ ಚಿತ್ರ ಆ ಹಳ್ಳಿಯಲ್ಲಿ ತಟಸ್ಥವಾಗಿ ಹರಿಯುವ ನದಿಯಂತೆ ಹರಿದು ಕೊನೆಗೊಳ್ಳುತ್ತದೆ.

ಅತ್ತು ಉಳಿದದ್ದು

In ಅಂದಂದು, ಯೋಚನೆ on August 3, 2007 at 11:00 pm

ಅಳು ಬರುತ್ತದೆ: ಅಳುವಂಥದ್ದನ್ನು ನೋಡಿ ಜನ ನಕ್ಕಾಗ ಅಥವಾ ನಗದೇ ತುಟಿ ಬಿಗಿದು ಹಿಡಿದಾಗ ಅಥವಾ ಏನು ಮಾಡಬೇಕೆಂದು ಗೊತ್ತಾಗದೇ ಮುಖಮುಖ ನೋಡಿದಾಗ.
ಅಳು ಬರುತ್ತದೆ: ನೆನಪಿಟ್ಟುಕೊಳ್ಳಬೇಕಾದ್ದನ್ನು ಜನ ಮರೆತಾಗ ಅಥವಾ ನೆನಪು ಮಾಡಿಕೊಳ್ಳಲು ಹೆಣಗಿದಾಗ ಅಥವಾ ನೆನಪಾಗದೇ ಮಿಕಮಿಕ ನೋಡಿದಾಗ.
ಅಳು ಬರುತ್ತದೆ: ನೋಡಬೇಕಾದ್ದನ್ನು ಜನ ನೋಡದೇ ಹೋದಾಗ ಅಥವಾ ನೋಡಿ ಮುಖ ತಿರುಗಿಸಿದಾಗ ಅಥವಾ ನೋಡಿಯೂ ಬಿಂಕದಲ್ಲಿ ಕಣ್ಣು ಮುಚ್ಚಿ ಧ್ಯಾನಕ್ಕಿಳಿದಾಗ.

ಚಳಿಗಾಲದಲ್ಲಿ ಬಿಸಿಗಾಳಿಯ ಆಸೆಗೆ ಮೈಯೊಡ್ಡಿದಾಗ ಚರ್ಮ ನಗುತ್ತದೆ. ಚರ್ಮ ನಕ್ಕಿತೆಂದು ಮೂಳೆ ಸಿಟ್ಟುಮಾಡಿಕೊಂಡು ಸೆಟೆದುಕೊಳ್ಳುತ್ತದೆ. ಉಗುರುಗಳೆಲ್ಲಾ ಬೆಳೆಯುವ ಬದಲು ಕರಗಿ ಹೋಗುತ್ತದೆ.

ಇಪ್ಪತ್ತು ಮೂವತ್ತಿಗೆ ಜಾರಿ, ನಲವತ್ತಕ್ಕೆ ಮುಟ್ಟಿ ಐವತ್ತನ್ನೋ ಅರವತ್ತನ್ನೋ ತಬ್ಬುತ್ತದೆ ನಾಳೆ. ಹತ್ತರ ಮನಸ್ಸು ಮಾತ್ರ ಕಿರುಬೆರಳನ್ನು ಹಿಡಿದು ಪುಟ್ಟಪುಟ್ಟ ಹೆಜ್ಜೆ ಇಟ್ಟು ಹಿಂಬಾಲಿಸುತ್ತದೆ.

ಎಲ್ಲ ದಾಟಿ ಹೋದರೂ ಏನೋ ಉಳಿದುಬಿಡುತ್ತದೆ.