You are currently browsing the category archive for the 'ಯೋಚನೆ' category.

“ಮಕ್ಕಳಿಗೆ ಧರ್ಮವನ್ನು ಬೋಧಿಸುವುದು ಚೈಲ್ಡ್ ಅಬ್ಯೂಸ್!” ಎಂದು ತುಂಬಿದ ರೈಲಿನಲ್ಲಿ ಒಬ್ಬ ತನ್ನೊಡನಿದ್ದವಳಿಗೆ ಜೋರಾಗಿ ಬೋಧಿಸಿದ. ಸುತ್ತಮುತ್ತಲಿದ್ದವರು ಸಣ್ಣಗೆ ಮಿಸುಕಾಡಿದರು. ಕೆಲವರು ಒಪ್ಪಿದವರಂತೆ ಕಂಡರೂ ಸಣ್ಣಗೆ ಗಂಟಲು ಸರಿಮಾಡಿಕೊಂಡು ಬೇರತ್ತ ತಿರುಗಿದರು. ಒಪ್ಪಿಗೆಯಾಗದವರು ಒಂದೆರಡು ಕ್ಷಣ ದುರುದುರು ಎಂದು ನೋಡಿ “ಹಾಳಾಗಿ ಹೋಗಲಿ” ಎಂಬಂತೆ ಇನ್ನೊಂದತ್ತ ತಿರುಗಿದರು.

Read the rest of this entry »

[ಈ ಸಾವಿನ ಸುದ್ದಿ ನೋಡಿ]

ಜೀವ ದಿಟ ಅನಿಸಲಿಲ್ಲವೇ ನಿನಗೆ?
ದೇವ ಸುಳ್ಳು ಅನಿಸಲಿಲ್ಲವೆ ನಿನಗೆ?
ನಂಬಿಕೆಯೇ ಎಲ್ಲ ಮೀರಿದ ಸತ್ಯ ನಿನಗೆ
ಬುಡವಿಲ್ಲದಿದ್ದರೂ ಅಲ್ಲವೆ?

ಆ ರಥದಲ್ಲಿ ಕೂತ ಗೊಂಬೆಯ
ಒಳಗೇನೋ ಕಂಡಿತೆನ್ನುವ
ಕೋಟಿ ಕೋಟಿ ಜನ ಕುರುಡುರೇ?
ಅನುಮಾನ ಸಹಜ
ಇರಬಹುದು ಎಂದೇಕೆ ಅನಿಸಲಿಲ್ಲ ನಿನಗೆ?

ನಿನ್ನ ಯಾವುದೋ ತಬ್ಬಲಿತನ
ಕಳಕೊಳ್ಳುವ ತವಕದಲ್ಲಿ
ನಿನ್ನ ಮಕ್ಕಳೀಗ ತಬ್ಬಲಿ

ರಥಚಕ್ರಕ್ಕೆ ಸಿಕ್ಕಿ ಸಾಯುವ ಪುಣ್ಯವಿಲ್ಲದಿದ್ದರೆ
ರಥವೆಳೆಯುವ ಕಾಲಿಗೆ ಸಿಕ್ಕಾದರೂ ಸಾಯಬೇಕು
ಮಕ್ಕಳನ್ನು ತಬ್ಬಲಿ ಮಾಡಬೇಕು.

ಅವರು
ತಬ್ಬಲಿಯಾಗಿ ರಥವೆಳೆಯುವ ಕೈಗಳಾಗಬೇಕು
ತುಳಿದು ಕೊಲ್ಲುವ ಕಾಲುಗಳಾಗಬೇಕು
ಅಯ್ಯೋ,
ರಥಚಕ್ರ ಮಾತ್ರ ತಿರುಗುತ್ತಲೇ ಇರಬೇಕು.

ಶಂಕರ ಮೊಕಾಶಿ ಪುಣೇಕರರ (ಗಂಗವ್ವ ಗಂಗಾಮಾಯಿ, ಅವಧೇಶ್ವರಿ) ಒಂದು ಪದ್ಯ ಇತ್ತೀಚೆಗೆ ಯಾಕೋ ಮತ್ತೆ ನೆನಪಾಯಿತು. ಹೆಸರು “ಮಾಯಿಯ ಮೂರು ಮುಖಗಳು” ಮತ್ತೊಂದೆರಡು ಬಾರಿ ಓದಿದೆ. ಪದ್ಯ ತಾಯ್ತನದ ಬಗ್ಗೆ. ವಿಶಾಲವಾದ ಅರ್ಥದಲ್ಲಿ ಅದರಲ್ಲಿ ಇಂಡಿಯಾ ಮತ್ತು ಸ್ವಾತಂತ್ಯ್ರದ ಬಗ್ಗೆಯೂ ಇದೆ. ಒಂದು ರೀತಿಯಲ್ಲಿ ಪೊಲಿಟಿಕಲ್ ಪದ್ಯ. ಆದರೆ ಅದರೊಳಗಿನ ಒಂದು ಅಂಶ ಮಾತ್ರ ನನ್ನ ನೆನಪಿನಲ್ಲಿ ಉಳಿದಿದ್ದೇ ಅದನ್ನು ಮತ್ತೆ ಓದಲು ಪ್ರೇರಣೆಯಾಯಿತು.
Read the rest of this entry »

ಕೇಳೋ ಸಚ್ಚರಿತ, ಮನುಜಾ
ಧೃಡ ಭಕ್ತಿಯಿಂದಲಿ ಹರಿಯ ನೆನೆದರೆ ಪಡೆವ ಮೋಕ್ಷ ಸಾಕ್ಷಿ || ಮನುಜಾ
ಧೃಡ ಭಕ್ತಿಯಿಲ್ಲದೆ ಹರಿಯ ನೆನೆದರೆ ಪಡುವ ನರಕವೇ ಸಾಕ್ಷಿ || ಮನುಜಾ ಕೇಳೋ ಸಚ್ಚರಿತ

Read the rest of this entry »

ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡುಗಾರಿಕೆಯ ಕಾರ್ಯಕ್ರಮ ಸಿಡ್ನಿಯಲ್ಲಿ ಇತ್ತೀಚೆಗೆ ನಡೆಯಿತು. ನಾನು ಹೋಗಲಿಲ್ಲ. ಹೋಗಬೇಕು ಅನಿಸಲಿಲ್ಲ.

ತುಂಬಾ ಇಂಪಾಗಿ ಹಾಡಬಲ್ಲ ಎಸ್.ಪಿಯ ಹಲವಾರು ವರ್ಷಗಳ “ಟ್ರೇನ್ಡ್” ದನಿಯಾಗಲಿ, ತೀಡಿತೀಡಿ ನುಣುಪಾದ “ಕಲ್ಚರ್ಡ್” ದನಿಯಾಗಲಿ ನನ್ನಲ್ಲಿ ಉತ್ಸಾಹ ಕೆರಳಿಸುತ್ತಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಇಂಡಿಯಾದ ಹಲವಾರು ಜನಪ್ರಿಯ ಹಾಡುಗಾರರ ತೊಂದರೆ ಇದು ಅನಿಸುತ್ತದೆ. ಇರಲಿ ಅದು ಮತ್ತಾವಾಗಲಾದರೂ ಬೇರೆಯಾಗಿಯೇ ಯೋಚಸಲು ಇಟ್ಟುಕೊಳ್ಳುತ್ತೇನೆ.

Read the rest of this entry »

ನನ್ನ ಲೋಕದ ಏನೇನು ಇಲ್ಲಿ ಬರೆದುಕೊಳ್ಳುತ್ತೇನೋ ಅದರಲ್ಲಿ ಎಷ್ಟೋ ತಲುಪುತ್ತದೆ, ಮತ್ತೆಷ್ಟೋ ತಲುಪುವುದೇ ಇಲ್ಲ. ಹಂಚಿಕೊಳ್ಳುವುದು ತಲುಪಲಿಕ್ಕೇ. ಆದರೂ ಬರೆಯುವುದು ತಲುಪಲಷ್ಟೇ ಅಲ್ಲ. ಅದು ಒಂದು ಮಾತು. ಯಾವುದು ತಲುಪುತ್ತದೆ ಯಾವುದು ತಲುಪುವುದಿಲ್ಲ ಅನ್ನುವುದು ಬರೇ ಕುತೂಹಲವಷ್ಟೇ ಅಲ್ಲ. ತುಂಬಾ ಮುಖ್ಯ ಕೂಡ.

Read the rest of this entry »

ಈ ಯುಗಾದಿಯ ಹೋಳಿಗೆ ಎಣ್ಣೆ ನೀರು ಸಂಭ್ರಮದಲ್ಲಿ ಜಿಂಬಾಬ್ವೆ ಜನರ ದನಿಗೆ ಬೆಲೆ ಸಿಗಬಹುದು, ಅವರಿಗೊಂದು ಹೊಸ ಯುಗ ಶುರುವಾಗಬಹುದು ಎಂದು ಆಶಿಸುತ್ತೇನೆ.
Read the rest of this entry »

ಎರಡು ವಾರದಿಂದ ಎಡೆಬಿಡದ ಮಳೆ. ಆಸ್ಟ್ರೇಲಿಯಾದ ಮೂಡಲ ಕಡಲತಡಿಯುದ್ದಕ್ಕೂ ಹೊಡೆದಿದ್ದೇ ಹೊಡೆದಿದ್ದು. ಬರಗಾಲ ಕೊನೆಗೊಳಿಸಲು ಹಟತೊಟ್ಟಂತೆ. ಇದು ಯಾವ ನಕ್ಷತ್ರದ ಮಳೆಯೋ ಎಂದುಕೊಳ್ಳುತ್ತೇನೆ. ಹೊಳೆ, ನದಿ, ಕೆರೆ, ಕೊಳ್ಳ ಎಲ್ಲ ತುಂಬಿ ಉಕ್ಕಿ ಹರಿದ ಸಂತಸ.  ಸಿಡ್ನಿಯಲ್ಲಿ ಪುರಂದರ ಆರಾಧನೆ - ಮೊನ್ನೆ ಭಾನುವಾರ. ನನ್ನ ತಲೆಯಲ್ಲಿ ಮರುಕಳಿಸಿದ ಒಂದೆರಡು ಪ್ರಶ್ನೆಗಳು. ಹಿಂದಿನ ದಿನವಷ್ಟೇ ಮಳೆ ನಿಂತು ಎಲ್ಲ ತಿಳಿಯಾಗಿ ಸೂರ್ಯ ಹಚ್ಚಗೆ ನಗುತ್ತಿದ್ದ.

Read the rest of this entry »

ಆವತ್ತು ಸತ್ಯ ಡೋನ್‌ಲೋಡ್ ಮಾಡಿಕೊಳ್ಳುತ್ತಿದ್ದೆ. ನನ್ನ ಗೆಳೆಯ ಯಾವುದೋ ಲಿಂಕ್ ಕಳಿಸಿದ್ದ. ಬರೀ ಸುಳ್ಳನ್ನೇ ಹೇಳ್ಕೊಂಡು, ಸುಳ್ಳನ್ನೇ ಕೇಳ್ಕೊಂಡು ಅದರಲ್ಲೇ ಜೀವನ ಮಾಡ್ಕೊಂಡಿದ್ಯ. ಸ್ವಲ್ಪ ಇದನ್ನ ಡೌನಲೋಡ್ ಮಾಡಿಕೊಂಡು ನೋಡು. ಸುಳ್ಳಿನ್ನ ತಲೇ ಮೇಲೆ ಹೊಡೆದ ಹಾಗಿದೆ ಅಂದ. ಶಾಕ್ ಹೊಡೆದ ಹಾಗಾಯ್ತು. ಸುಳ್ಳಿನ ತಲೆ ಮೇಲೆ ಹೊಡೆದ ಹಾಗೆ ಸತ್ಯ ಯಾಕಿರಬೇಕು ಅಂತ ತೊದಲಿದೆ. ಅನೈತಿಕ ಪ್ರಶ್ನೆಗಳನ್ನ ಕೇಳಬೇಡ ಅಂತ ಗದರಿದ. ಸರಿ ಸರಿ ಅಂತ ಗೊಣಗಿಕೊಂಡೆ.

Read the rest of this entry »

ಪ್ರಚಾರಕ್ಕೆ ಹಲವು ದಾರಿಗಳನ್ನು ಬಹುಪಾಲು ಎಲ್ಲ ಧರ್ಮಗಳೂ ಕಂಡುಕೊಂಡಿದೆ. ಇದು ಹರಡುತ್ತಿರುವ ಧರ್ಮಕ್ಕೆ ಮಾತ್ರವಲ್ಲ ಬೇರು ಬಿಟ್ಟ ಧರ್ಮಗಳಿಗೂ ಅನ್ವಯಿಸುವ ಮಾತು. ಏಕೆಂದರೆ ಧರ್ಮ ಪ್ರಚಾರ ಅನ್ನುವುದು ನಿರಂತರ ನಡೆಯಬೇಕಾದ ಕೆಲಸ.  ಬಾಲ್ಯ, ಕೌಮಾರ್ಯ, ಯೌವ್ವನದಲ್ಲಿರುವವರಿಗೆ ಇದು ಸದಾ ನಡೆಯಬೇಕಾದ ಶಿಕ್ಷಣ.

Read the rest of this entry »

ನಮ್ಮ ಪೂರ್ವಿಕರ ಬಳುವಳಿ ಅಂತ ಮುಜುಗರದಿಂದ ಹೇಳ್ತಾರೆ, ಹಸಿರು ನೀಲಿ ಅಂತ ಕೂಡ ಹೇಳ್ತಾರೆ. ಕಂಡವರಿಗೇ ಗೊತ್ತು. ನನಗೆಲ್ಲಿ ಆ ಭಾಗ್ಯ? Read the rest of this entry »

ಈ ಆಕ್ರಮಣದ ಯುಗದಲ್ಲಿ
ನಂಬಿಕೆಯ ಗುತ್ತಿಗೆ ಹಿಡಿದ ಧಾರ್ಮಿಕ ಮೂಲಭೂತವಾದಿ
ನುಡಿಯ ಗುತ್ತಿಗೆ ಹಿಡಿದ ಭಾಷಾ ಮೂಲಭೂತವಾದಿ
Read the rest of this entry »

ಕೆಲಸದಲ್ಲಿ ಮೊನ್ನೆ ಹೊಸ ಸಾಫ್ಟ್‌ವೇರ್‍ ಬಗ್ಗೆ ಒಂದಿಬ್ಬರು ಗೊಣಗಿಕೊಳ್ಳುತ್ತಿದ್ದರು. ನಾನು ತಲೆ ತಗ್ಗಿಸಿ ನನ್ನ ಪಾಡಿಗೆ ಕಾಫಿ ಮಾಡಿಕೊಳ್ತಾ ಇದ್ದೆ. ಗೊಣಗಾಟದ ನಡುವಲ್ಲಿ ಒಬ್ಬಳು ಹೇಳಿದ್ದು Read the rest of this entry »

ಈ ವರ್ಷ ಏನೆಲ್ಲಾ ಬರೆಯಬೇಕೆಂದುಕೊಂಡಿದ್ದೆ…
ಸ್ವಾರ್ಥದ ಒಳ್ಳೆತನ ಮತ್ತು ಅಗತ್ಯ. Read the rest of this entry »


ಮೊನ್ನೆ ನಾವು ಕೆಲವರು ಹರಟೆ ಹೊಡೆದ್ದದ್ದರ ಬಗ್ಗೆ ಹೇಳ್ತಾ ಇದ್ದೀನಿ.

ಗುಂಪಾಗಿ ಕೂತಿದ್ದ ನಮ್ಮ ನಡುವೆ ಒಬ್ಬರು ಹಿರಿಯರು ಇದ್ದರು. ತುಂಬಾ ಗತ್ತಿನಿಂದ ತಮ್ಮ ಹಳ್ಳಿಯಲ್ಲಿ ಚಿಕ್ಕವರಿದ್ದಾಗ ಕೇಳಿದ ಒಂದು ಕತೆಯನ್ನು ಹೇಳಿದರು. ಆ ಕತೆ ಕೇಳಿದಾಗಿನಿಂದ ತಾವು ಪವಾಡಗಳನ್ನು ಬಲವಾಗಿ ನಂಬುತ್ತೇನೆ ಎಂದು ವಿವರಿಸಿದರು. ಆಗ ಹಿರಿಯರ ಮೇಲೆ ಅಪಾರ ಗೌರವವಿದ್ದ ಇನ್ನೊಬ್ಬರು ಶುರು ಹಚ್ಚಿಕೊಂಡರು. Read the rest of this entry »

ಹಿಂದುಳಿದ ದೇಶಗಳ ಅವಸ್ಥೆಗೆ ಜಾಗತಿಕ ಬಲಿಷ್ಟ ದೇಶಗಳನ್ನು ದೂರುವುದು ಆಂಶಿಕ ಸತ್ಯ ಅಷ್ಟೆ ಎಂದು ಇತ್ತೀಚಿನ ನನ್ನ ಬರಹಕ್ಕೆ ಶ್ರೀಕಾಂತರು ಪ್ರತಿಕ್ರಯಿಸಿದ್ದರು. ಅದು ನಿಜವೂ ಹೌದು. ಆದರೆ, ಅದು  ಎಷ್ಟಂಶ ಅನ್ನೋದು ಅವರವರ ನಿಲುವಿಗೆ ತಳುಕು ಹಾಕಿಕೊಂಡಿರತ್ತದೆ ಅಲ್ಲವೆ ಎಂದು ಕೇಳಿದ್ದೆ. ಅವರ ಪ್ರತಿಕ್ರಿಯೆ ಬಗ್ಗೆ, ಮತ್ತು ನನ್ನ ಉತ್ತರದ ಬಗ್ಗೆ ಯೋಚಿಸಿದಾಗ ನಾನು ಹಾಗೆ ಯಾಕೆ ಹೇಳಿದೆ ಎಂದು ವಿವರಿಸಬೇಕು, ನನಗೆ ಯಾವ ನಾಯಕರು ನೆನಪಾದರು ಎಂದು ಹೇಳಬೇಕು ಅನಿಸಿತು. Read the rest of this entry »

ಹಲವಾರು ವರ್ಷಗಳ ಹಿಂದೆ ಸಿಡ್ನಿಗೆ ಅಮೇರಿಕಾದ ೨೫ ವರ್ಷದ ತರುಣಿಯೊಬ್ಬಳು ಬಂದಿದ್ದಳು. ತನ್ನ ಡಾಕ್ಯುಮೆಂಟರಿವೊಂದನ್ನು ನಮಗೆ ತೋರಿಸಿದಳು. (ಅವಳ ಮತ್ತು ಅವಳ ಚಿತ್ರದ ಹೆಸರು ಈಗ ಮರೆತಿದ್ದೇನೆ) ಆಕೆಯ ಚಿತ್ರ ಅಮೇರಿಕಾ, ಕ್ಯಾನಡಾದ ಡಾಕ್ಯುಮೆಂಟರಿಕಾರರ ಬಗ್ಗೆ. ಕಾವ್ಯಾತ್ಮಕವಾಗಿತ್ತು. ಅವರ ಯೋಚನಾಕ್ರಮ ಮತ್ತು ಕೆಲಸದ ಕ್ರಮಗಳನ್ನು ಚಿತ್ರವಾಗಿಸಿದ್ದಳು. ಆ ಚಿತ್ರವನ್ನು ಮಾಡುವಾಗ ಆಕೆ ಮೈಕಲ್ ಮೋರ್‌ನನ್ನು ಮಾತಾಡಿಸಲು ಶತ ಪ್ರಯತ್ನ ಮಾಡಿದ್ದಳು. “ಆ ಬಿಲ್ಡಿಂಗಿನ, ಇಷ್ಟನೇ ಮಹಡಿಗೆ ಬಾ” ಎಂದು ಆತನ ಸಹಾಯಕರಿಂದ ಹೇಳಿಸಿಕೊಂಡು ಹೋಗುತ್ತಾಳೆ. ಅಲ್ಲಿ ಈಕೆಯನ್ನು ಗೋಡೆಗಳ ಮೇಲಿನ ಕೆಲವು ಸೆಕ್ಯುರಿಟಿ ಕ್ಯಾಮೆರಾಗಳಷ್ಟೆ ಎದುರುಗೊಳ್ಳುತ್ತವೆ. ಉಳಿದಂತೆ ಖಾಲಿ. ಆಗಷ್ಟೆ ಮೋರನ “ಬೌಲಿಂಗ್ ಫಾರ್‍ ಕಾಲಂಬೈನ್” ಬಿಡುಗಡೆಯಾಗಿ ಜನಪ್ರಿಯವಾಗಿದ್ದ ದಿನಗಳು.

Read the rest of this entry »

ಹೋದ ವಾರ ಆಸ್ಟ್ರೇಲಿಯಾದಲ್ಲಿ ಚುನಾವಣೆ ಮುಗಿಯಿತು. ಸರ್ಕಾರ ಬದಲಾಯಿತು.ಅದರ ಬಗ್ಗೆ ಬರೀ ಬೇಕು ಅಂತ ಅನ್ಕೊಂಡರೂ ಆಗಲಿಲ್ಲ. ಈವತ್ತು ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿತಂತೆ.

ಹೋದ ಸರ್ಕಾರ ಬಿದ್ದಿದ್ದು, ಹೀನಾಮಾನವಾಗಿ ಸೋತಿದ್ದು ಯಾಕಿದ್ದೀತು? ಇದಕ್ಕೆಲ್ಲಾ ಏನು ಅರ್ಥ ಅಂತ ಯೋಚಿಸುತ್ತಿದ್ದೀನಿ. Read the rest of this entry »

ಇರುಳು ನಿದ್ದೆಯಲ್ಲಿ ಬರಬೇಕಾದ ಕನಸು, ಹಗಲೆಲ್ಲಾ ಜತೆಯಲ್ಲೇ ಓಡಾಡಿಕೊಂಡಿದ್ದರೆ ತುಂಬಾ ಕಷ್ಟ. ಕೆಲವು ಕಡೆಗಳಿಗೆ ಅದನ್ನು ಕರಕೊಂಡು ಹೋಗಲು ನನಗೆ ಇಷ್ಟವಿಲ್ಲ. ಅದು ಕನಸಿಗೆ ಗೊತ್ತಾಗುವುದಿಲ್ಲ. ಹೇಳಿದರೆ ಕೇಳಲು ಅದಕ್ಕೆ ಕಿವಿಯಾಗಲೀ ಮತ್ತೊಂದಾಗಲೀ ಇಲ್ಲ. Read the rest of this entry »

ಕರ್ನಾಟಕದ “ವಚನಭ್ರಷ್ಟತೆ”, “ಮಾನ-ಅವಮಾನ”, “ಗೌರವ-ಅಗೌರವ” ಗಳ ಹುಡುಗಾಟದ ಅಭದ್ರತೆಯಿಂದ ನಾನು ನೇರ ಬಂದಿಳಿದದ್ದು ಆಸ್ಟ್ರೇಲಿಯಾದ ಚುನಾವಣಾ ಪ್ರಚಾರದ ಕೂಗಾಟ, ಹಾರಾಟದ ನಡುವಿಗೆ.
Read the rest of this entry »

ಸಿಡ್ನಿಗೆ ಬಂದ ಮರುದಿನವೇ ಕೆಲಸದಲ್ಲಿ ತೊಡಗಿಕೊಂಡೆ. ಒಂದು ವಾರ ನೋಡ ನೋಡುತ್ತಲೇ ಜಾರಿ ಹೋಗಿತ್ತು. ಆದರೂ ಸಿಡ್ನಿ ತಲುಪಿದ್ದೇನೆ ಅನಿಸುತ್ತಿಲ್ಲ. ಇನ್ನೂ ಬೆಂಗಳೂರಿನಲ್ಲಿರುವಂತೇ.

Read the rest of this entry »

೩/೧೧/೦೭ ರಾತ್ರಿ ೧೦ ಗಂಟೆ.

ಬೆಂಗಳೂರು ಏರ್‌ಪೋರ್ಟಿನ ವಿಧಿ ವಿಧಾನಗಳನ್ನೆಲ್ಲಾ ಮುಗಿಸಿ ಕೂತು ನಿಟ್ಟುಸಿರುಬಿಡುತ್ತೇನೆ. ಬರುತ್ತಿದ್ದಂತೆಯೇ ಹೊರಟೂ ಬಿಡುತ್ತಿದ್ದೇನೆ. ಬೆಂಗಳೂರನ್ನು ಬಿಡುತ್ತೇನೆ.

Read the rest of this entry »

ಸಣ್ಣವನಿದ್ದಾಗಲೇ ಅಲೀಬಾಬಾ ನಾಟಕಕ್ಕೆ ನನ್ನನ್ನು ಸೇರಿಸಿಕೊಂಡು ಆಡಿಸಿದ ಪ್ರೇಮಾ ಕಾರಂತ್ ಈವತ್ತು ಕೊನೆ ಉಸಿರೆಳೆದರು… ಒಂದೆರಡು ವಾರದಿಂದ ಬಳಲುತ್ತಿದ್ದರು… ಆಸ್ಪತ್ರೆಯಲ್ಲಿದ್ದರು…

Read the rest of this entry »

ಮೈಸೂರಿನಲ್ಲಿ ಮೊನ್ನೆ ಎಂಬತ್ತರ ಬೆಂಗಳೂರು ಧುತ್ತನೆ ಎದುರಾಯಿತು.

ಮೈಸೂರಿನ ಹೊರವಲಯದ ಬಡಾವಣೆಯಲ್ಲಿ ಇರುವ “ನಟನ” ಎಂಬ ಪುಟ್ಟ ರಂಗಮಂದಿರ. ಸ್ವಲ್ಪ ಉದ್ದವೇ ಅನಿಸಿದ ಈ ವರ್ಷದ ತಿರುಗಾಟದ ನಾಟಕ - ‘ಈ ನರಕ… ಆ ಪುಳಕ…’. ತೆರೆಗಳು, ಟಿ.ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ, ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳ್ಳಿಲ್ಲ, ಸಿದ್ಧತೆ, ಪೋಲೀಸರಿದ್ದಾರೆ ಎಚ್ಚರಿಕೆ - ಈ ಏಳು ಲಂಕೇಶರ ನಾಟಕಗಳನ್ನು ಕೂಡಿಸಿ ರಘುನಂದನ್ ಈ ನಾಟಕವನ್ನು ರೂಪಿಸಿದ್ದಾರೆ. ಲಂಕೇಶರ ಹರಿತವಾದ ಮಾತುಗಳು, ಸಾಮಾನ್ಯ ನುಡಿಗಳಲ್ಲೇ ಕಾವ್ಯವನ್ನು ಮಿಂಚಿಸುತ್ತಾ ಗಾಢವಾಗುವುದು ತುಂಬಾ ಕುಶಿ ಕೊಟ್ಟಿತು. ನೀನಾಸಂರಿಗರ ನುಡಿರೀತಿ ಯಾಕೋ ಈ ಬಾರಿ, ಈ ನಾಟಕಕ್ಕೆ ಅತಿ ಭಾರವಾದಂತೆ ಅನಿಸಿತು. ಸುಲಭ ವಾಚನದಿಂದ ಪ್ರಭಾವ ಬೀರಬಹುದಾದ ಮಾತುಗಳು ಇಲ್ಲಿ ಹೇಳುವ ರೀತಿಯ ಒತ್ತಿನಿಂದ ಕುಂದಿದಂತೆ ಅನಿಸಿತು. ಏನೋ ಕಳಕೊಂಡಂತೆ ಅನಿಸಿತು. ಇದು ಉದ್ದೇಶಪೂರ್ಣವಿರಬಹುದೆ. ಹೌದಾದರೆ ಏತಕ್ಕಾಗಿರಬಹುದು ಎಂದು ಯೋಚಿಸಿದೆ. ಆದರೆ ಎರಡೂ ಮುಕ್ಕಾಲು ಗಂಟೆಗೂ ಮೀರಿದ ಅವಧಿಯ ಬಗ್ಗೆ ನೀನಾಸಂ ಯೋಚಿಸಿದರೆ ಒಳ್ಳೆಯದಿತ್ತು ಅನಿಸಿತು.

ಹತ್ತು ಗಂಟೆಯ ಸುಮಾರಿಗೆ ಮುಗಿದ ನಾಟಕದಿಂದ ಹೊರಬಂದೆವು. ಸಣ್ಣಕೆ ಮಳೆ ಹನಿಯ ತೊಡಗಿತು. ಜನರೆಲ್ಲಾ ಸ್ಕೂಟರ್‍ ಕಾರುಗಳನ್ನು ಹತ್ತಿ ಕತ್ತಲಲ್ಲಿ ಕರಗಿಹೋಗುತ್ತಿದ್ದರು. ಆಟೋ ಹಿಡಿಯಲು ದೂರದಲ್ಲಿದ್ದ ಮುಖ್ಯ ಬೀದಿಗೆ ಬಂದೆವು. ಯಾರೂ ಓಡಾಡದ ದೊಡ್ಡ ಬೀದಿ. ಇರುಳಲ್ಲಿ ಅಲ್ಲಲ್ಲಿ ಉರಿಯುತ್ತಿದ್ದ ದೀಪಗಳು. ಆಗೊಂದು ಈಗೊಂದು ಓಡಾಡುತ್ತಿದ್ದ ವಾಹನಗಳು. ಆದರೆ ಆಟೋಗಳು ಮಾತ್ರ ಒಂದೂ ಇಲ್ಲ. ದಿಕ್ಕು ತಪ್ಪಿದವರಂತೆ ಅತ್ತಿತ್ತ ಓಡಾಡುತ್ತಿದ್ದಾಗ ಇದ್ದಕಿದ್ದ ಹಾಗೆ ಧೋ ಎಂದು ಸುರಿದ ಮಳೆ. ದೂರದಲ್ಲಿ ಕಾಣುತ್ತಿದ್ದ ಮುಚ್ಚಿದ ಅಂಗಡಿಗೆ ಓಟ. ಅದರ ಮುಂದಿನ ಛಾವಣಿಯಡಿ ಸ್ವಲ್ಪ ಸುಧಾರಿಸಿಕೊಂಡೆವು. ಮುಂದೇನು ಎಂದು ಹೊಳೆಯಲಿಲ್ಲ. ರಂಗಮಂದಿರದ ಕಡೆಯಿಂದಲೇ ತೆವಳುತ್ತಾ ಬರುತ್ತಿದ್ದ ಕಾರಿಗೆ ಅಡ್ಡಹಾಕಿದೆ. ಬೆಳಿಗ್ಗೆ ಸಿಕ್ಕಿದ್ದ ಗೆಳೆಯ ಅದರಲ್ಲಿದ್ದರು. ತುಂಬಿಕೊಂಡಿದ್ದ ಕಾರಿನಲ್ಲಿ ನಾವೂ ತೂರಿಕೊಂಡೆವು. ಮನೆಯ ಹತ್ತಿರ ಬಿಟ್ಟರು.

ಹತ್ತು ನಿಮಿಷದ ಹಿಂದೆ ಮಳೆಯಲ್ಲಿ ಸಿಕ್ಕಿಕೊಂಡು ಚಡಪಡಿಸಿ ದಿಕ್ಕು ತಪ್ಪಿದ್ದು. ನಿರ್ಜನ ಬೀದಿ. ಸಿಗದ ಆಟೋ. ಈಗ ಮನೆಯ ಎದುರು ಕಾರಿನಿಂದ ಇಳಿದದ್ದು. ಎಂಬತ್ತರ ಬೆಂಗಳೂರಿನ ನೆನಪು.

 

ಬೆಂಗಳೂರಿನಿಂದ ಮೂಡುಬಿದ್ರೆಯ ದಾರಿಯಲ್ಲಿ ತೆವಳುತ್ತಿರುವ ಬಸ್ಸು. ನಡುರಾತ್ರಿ. ಬಸ್ಸಿನ ಅಲ್ಪ ಬೆಳಕಿನಲ್ಲಿ ಸರಿದು ಹೋಗುತ್ತಿದ್ದ ಮನೆ, ಅಂಗಳ, ಹಿತ್ತಲು, ಹಾಡಿ, ಕಾಡು… ಬಸ್ಸಿನ ಕ್ಷಣಿಕ ಬೆಳಕಿನಲ್ಲಿ ತೋರಿ ಕಾಣೆಯಾಗುತ್ತಿದ್ದ ದೇವಸ್ಥಾನ, ಮಸೀದಿ, ಇಗರ್ಜಿ ಗೋಪುರಗಳು… ಮತ್ತೆ ಕತ್ತಲೆಯಲ್ಲಿ ಕಾಡು ಬೇಲಿ ಇತ್ಯಾದಿ.

ಸಣ್ಣವನಿದ್ದಾಗ ಘಾಟಿ ಇಳಿದು ಹತ್ತುವುದನ್ನು ನೋಡುವ ಕುತೂಹಲದಲ್ಲಿ ಇವೆಲ್ಲವನ್ನು ಅರ್ಧ ಮಂಪರಿನಲ್ಲಿ ನೋಡುತ್ತಾ ನಿದ್ದೆ ಹತ್ತಿಬಿಡುತ್ತಿತ್ತು. ಘಾಟಿ ಹತ್ತಿ ಇಳಿಯುವುದು ಹಲವು ಸಲ ಸಿಕ್ಕುತ್ತಿರಲಿಲ್ಲ. ಆದರೆ, ಈ ಸಲ ಹಾಗಾಗಲಿಲ್ಲ. ಜೆಟ್‌ಲಾಗಿನ ಅವಾಂತರದಲ್ಲಿ ಎಚ್ಚರವಿತ್ತು. ಮನಸ್ಸಿನಲ್ಲಿ ನೆನಪುಗಳು ಬೆಚ್ಚಗೆ ಅರಳುತ್ತಿದ್ದವು. ಸಣ್ಣ ಮಗುವಿನ ಹಾಗೇ ಇವನ್ನೆಲ್ಲಾ ನೋಡುತ್ತಿದ್ದೇನೆ, ಅದೇ ಮಂಪರಿನಲ್ಲಿ, ಘಾಟಿಯ ಬರುವಿಕೆಯ ಕುತೂಹಲದಲ್ಲಿ ಅನಿಸುತ್ತಿತ್ತು!

ಬಸ್ಸು ಯಾಕೋ ತುಂಬಾ ತಡವಾಗಿ ಚಾರ್ಮಾಡಿ ಘಾಟಿ ತಲುಪಿತ್ತು. ಮುಂಜಾವದ ಬೆಳಕಲ್ಲಿ ಕಾತರದ ಮನಸ್ಸನ್ನು ಚೇಡಿಸುವಂತೆ ಮೆಲ್ಲನೆ ದೂರದ ಗುಡ್ಡ ಬೆಟ್ಟ ಮೋಡ ಎಲ್ಲ ಕಾಣತೊಡಗಿತು.

ಸರಕ್ಕನೆ ಇಳಿಯಬೇಕಾದ ಘಾಟಿಯ ಇಳಿಜಾರಿನಲ್ಲಿ ಏಕಾಏಕಿ ನಿಂತುಬಿಟ್ಟ ಬಸ್ಸು. ಮುಂದೆ ಹತ್ತಾರು ಬಸ್ಸು ಲಾರಿ ವಾಹನಗಳ ಸಾಲು. ತುಂಬಾ ಇಕ್ಕಟ್ಟಾದ ದಾರಿಯಲ್ಲಿ ಮುಂದಿಂದ ಬರುವ ವಾಹನಗಳನ್ನು ಸಂಬಾಳಿಸಿಕೊಂಡು ಹೋಗಬೇಕು. ಕೆಲವು ತಿರುವುಗಳಲ್ಲಿ ಅರ್ಧ ಮುಕ್ಕಾಲು ಗಂಟೆ ನಿಂತುಬಿಡುತಿತ್ತು. ಶಿರಾಡಿ ಘಾಟಿ ಮುಚ್ಚಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ಎರಡರಷ್ಷು ಗಾಡಿಗಳು. ನಿಂತ ಬಸ್ಸಿಂದ ಇಳಿದು ಅಡ್ಡಾಡುತ್ತಾ, ಸರ್ಕಾರವನ್ನು ಬಯ್ಯುತ್ತಾ ಕಾಲದೂಡುತ್ತಿದ್ದ ಮಂದಿ. ಹೀಗೆ ಮೆಲ್ಲನೆ ತೆವಳಿ ಇಳಿಯುವಾಗ ನಾಕೈದು ಗಂಟೆ ಕಳೆದು ಬಿಟ್ಟಿತ್ತು. ಬೆಳಕು ಚೆನ್ನಾಗಿಯೇ ಹರಿದಿತ್ತು.

ಅರೆ ಮಂಪರಿನಲ್ಲಿ ಘಾಟಿ ಇಳಿಯುವ ಕಾರ್ಯಕ್ರಮವನ್ನು ಇಷ್ಟವಿಲ್ಲದಿದ್ದರೂ ಮತ್ತೊಂದು ದಿನಕ್ಕೆ ಮುಂದೂಡಬೇಕಾಯಿತು.

ರಂಜಾನ್ ಹಬ್ಬದ ಅರ್ಥ ಹುಡುಕುತ್ತಿದ್ದೆ.

ರಂಜಾನಿಗೆ ಅರಾಬಿಕ್ಕಿನ ಮೂಲ ಪದ `ರಮಿದ` ಅಥವಾ `ಅರ್-ರಮದ್`. ಅವುಗಳು ಸೂಚಿಸುವುದು ತೀವ್ರವಾಗಿ ಸುಡುವ ಒಣ ಉರಿಯನ್ನು- ಅದೂ ನೆಲಕ್ಕೆ ಸಂಬಂಧಿಸಿದ್ದು. ಅದೇ ಮೂಲಪದದಿಂದ ಹುಟ್ಟಿದ ರಮ್‌ದಾ ಪದದ ಅರ್ಥ-ಬಿಸಿಲಿಗೆ ಸುಟ್ಟ ಮರಳು ಎಂದು. ಕೆಲವರು ಹಸಿವಿನಿಂದ ಹೊಟ್ಟೆಯಲ್ಲಿ ಸುಡುವ ಅನುಭವವನ್ನು ಅದು ಸೂಚಿಸುತ್ತದೆ ಎಂದು ಹೇಳಿದರೆ, ಇನ್ನು ಕೆಲವರು ಅದು ಬಿಸಿಲು ನೆಲವನ್ನು ಸುಡುವಂತೆ ಸದ್ಭಾವ ದುಷ್ಟತನವನ್ನು ಸುಟ್ಟುಹಾಕುವುದರ ಸಂಕೇತ ಎನ್ನುತ್ತಾರೆ. ಇನ್ನೂ ಕೆಲವರ ಪ್ರಕಾರ, ಮರಳು ಹಾಗು ಕಲ್ಲುಗಳು ಬಿಸಿಲನ್ನು ಅವಾಹಿಸಿ ತಾವೇ ಸುಡುವಂತೆ, ಹಸಿವಿನಲ್ಲಿ ಅಲ್ಲಾಹುವಿನ ನೆನಪು ಹಾಗು ಪಶ್ಚಾತ್ತಾಪದ ಆವಾಹನೆ ಸುಲಭ ಎನ್ನುತ್ತಾರೆ.

ಅರ್-ರಮದ್- ಮೂಲಪದದಿಂದಲೇ ಹುಟಿದ ಗಾದೆ- ಕಲ್ ಮುಸ್ತಜೀರ್ ಮಿನರ್, ರಮದಾ ಬಿನ್ನರ್. ಬಾಣಲೆಯಿಂದ ಹಾರಿ ಬೆಂಕಿಗೆ ಬಿದ್ದದ್ದು. ಈ ಗಾದೆಯನ್ನು ಓದುತ್ತಿದ್ದಂತೆ, ಜಾಗತಿಕ ಮಹಾಶಕ್ತಿಗಳ ಬೇಗೆಯಡಿ ಸುಡುತ್ತಲೇ ಇರುವ ಪ್ಯಾಲಸ್ಟೇನಿನ ಮಕ್ಕಳ ಮುಖಗಳು ಮನಕ್ಕೆ ಎದುರಾದವು. ಇನ್ನು ಸುಡಲು ಏನೂ ಉಳಿದಿಲ್ಲದಿದ್ದರೂ ಪರಿತಾಪ ಮುಗಿಯದ ಆಫ್ಗಾನಿಸ್ತಾನ್‌ದ ದಿಟ್ಟ ಮಹಿಳೆಯರು ನಕ್ಕರು. ಬಾಣಲೆಯಿಂದ ಬೆಂಕಿಗೆ ಬಿದ್ದು ಕರಟುತ್ತಿರುವ ಇರಾಖಿನಲ್ಲಿ ತಲೆಗೆ ಕೈಹೊತ್ತು ಕೂತವರು ಮನದ ಚಿತ್ರಗಳಾದರು. ಎರಡು ಹೊಟ್ಟೆ ಉರಿಗಳ ನಡುವೆ ಒಣಗಿ ನಲಗುತ್ತಿರುವ ಪ್ರೀತಿಯ ಕಾಶ್ಮೀರದ ತಂಪೆಲ್ಲಿ ಹಾರಿದೆ ಎಂದು ಹುಡುಕುವಂತಾಯಿತು.

ಪರಿಸರದ ಮೇಲೆ ಮನ ಬಂದಂತೆ “ಆಕ್ರಮಣ” ಮಾಡುತ್ತಿದ್ದೇವೆ. ಅಂಥ ಜೀವನ ರೀತಿಯನ್ನೇ ಮೆರೆಯುತ್ತಿದ್ದೇವೆ. ಈ ಬುವಿಯನ್ನು ಕಾದ ಬಾಣಲೆ ಮಾಡುತ್ತಿದ್ದೇವೆ. ಹಾಗೆಂದು ಗೊತ್ತಿದ್ದೂ, ಅದರ ಬಗ್ಗೆ ತಣ್ಣಗೆ ಸಣ್ಣ ಪುಟ್ಟ ಮಾತುಗಳನ್ನಾಡಿಕೊಂಡು ಕೂತಿದ್ದೇವೆ.

ಕಣ್ಣೆದುರಿನಲ್ಲೇ ನಡೆಯುತ್ತಿರುವ ಲೋಕದ ಅನಾಚಾರಗಳನ್ನು, ಹತ್ಯಾಕಾಂಡಗಳನ್ನು ನೋಡುತ್ತಾ ಮೂಕರಾಗಿ ಕೂರವ ನಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡಲು ಒಂದಲ್ಲ ಸಾವಿರಾರು ರಂಜಾನ್-ವ್ರತ ಸಾಲದೇನೋ ಎಂದು ಮನಸ್ಸು ಒಣಗಿ ಮುರುಟುತ್ತದೆ.

ಅಲ್ಲಾಹುವಿನ ದೂತ ಒಂದು ಹಾದಿತ್ತಿನಲ್ಲಿ ಹೇಳುವಂತೆ- `ಬೆಳಗಿನ ಎಳೆಬಿಸಿಲು ಮರಿ ಒಂಟೆಗೆ ಉರಿಯಾಗಿ ತಟ್ಟಿದಾಗ ಬಾಕಿವುಳಿದ ತಪ್ಪಿತಸ್ಥರ ಪ್ರಾರ್ಥನೆಯ ಕಾಲ ಬಂದಿದೆ`.

 

boots.jpg

ಈ ಮರಣ ಪದ್ಯಕ್ಕೆ ಗಾಢವಾಗಿ ಪ್ರತಿಕ್ರಿಯಿಸಿದ ಇಲ್ಲಿ ಬ್ಲಾಗಿಸುವ ಟೀನಾ ಸೋಲ್ಸನಿತ್ಸಿನ್‌ನ “ಎ ಡೇ ಇನ್ ದ ಲೈಫ್ ಆಫ್ ಇವಾನ್ ಡೆನೀಸೊವಿಚ್‌” ನಾನು ಓದಬೇಕು ಎಂದು ಸೂಚಿಸಿದರು. ಓದಬೇಕು ಎಂದು ಈ ಹಿಂದೆ ಅಂದುಕೊಂಡಿದ್ದರೂ ಓದಲಾಗಿರಲಿಲ್ಲ. ಇದೊಂದು ಪ್ರೇರಣೆ ಸಾಕಾಯ್ತು. ಕೈಗೆತ್ತಿಕೊಂಡೆ.

ನಡುವೆ ಏಪೆಕ್ ಸಮಿಟ್‌ನ ಪ್ರೊಟೆಸ್ಟ್‌ನಲ್ಲಿ ಪಾಲ್ಗೊಂಡಾಗ ನಾನು ಹಲವರಿಗೆ ಉತ್ತರಿಸಬೇಕಾಗಿ ಬಂದ ಪ್ರಶ್ನೆ “ನೀನು ಏನನ್ನು ವಿರೋಧಿಸುತ್ತಿದ್ದೀಯ?” ಕೆಲಸ, ಹಣ ಆಸೆಗಳು ಎಲ್ಲ ಇರುವ ನಿನಗೆ ತೊಂದರೆ ಏನು? ಅಂದರೆ, ವಯ್ಯಕ್ತಿಕವಾಗಿ ನಿನಗೆ ಏನು ಅನ್ಯಾಯವಾಗಿದೆ? ಪ್ರಶ್ನೆ ಕೇಳಿದವರು ಉತ್ತರಿಸದ ನನ್ನನ್ನು ಒಂದು ಕ್ಷಣ ದಿಟ್ಟಿಸಿ, ಕೇಳಬಾರದಿತ್ತು ಎಂಬಂತೆ ತಟ್ಟನೆ ತಮ್ಮ ಕೆಲಸಕ್ಕೆ ವಾಪಸಾಗುತ್ತಾರೆ. ಅವರ ತಲೆಯಲ್ಲಿ ಪ್ರಶ್ನೆ. ನನ್ನ ತಲೆಯಲ್ಲಿ ಅದಕ್ಕೆ ಉತ್ತರವಾಗಲು ನಿರಾಕರಿಸುವ ಹಲವು ವಿಚಾರಗಳು.

ಸಿಡ್ನಿಯಲ್ಲಿ ವಸಂತ ಛಳಿಗಾಲದ ಬಟ್ಟೆ ಕಳಚಿ ಹೊಸ ಉನ್ಮಾದದಿಂದ ಕುಣಿಯುತ್ತಿದೆ. ಹಚ್ಚವಾಗಿ ನಗುವ ಬಿಸಿಲು. ಮಳೆ ಬಂದು ತೊಳೆದಿಟ್ಟ ನೆಲದಲ್ಲಿ ಹಸಿರು ಚಿಗುರು. ಎಲ್ಲ ಹೋದ ವರ್ಷದಂತೆಯೇ. ಆದರೆ ಈ ವರ್ಷ ಆಸ್ಟ್ರೇಲಿಯಾದ ಬರಗಾಲ ಕೊನೆಗಾಣುತ್ತಿರಬಹುದು ಎಂಬ ಉಲ್ಲಾಸವೂ ಇದೆ. ಅದು ಮನಸ್ಸನ್ನು ಹಗುರಾಗಿಸಿದೆ.

ಸೋಲ್ಸನಿತ್ಸಿನ್ ಸೈಬೀರಿಯಾದಲ್ಲಿ ಅಮಾನುಷವಾಗಿ ತಾನೇ ಬಂಧಿಸಲ್ಪಟ್ಟಿದ್ದ. ಹತ್ತಾರು ವರ್ಷ ಮಾರಣಾಂತಿಕ ಹಿಮದಲ್ಲಿ ಹಿಂಸೆ ಅನುಭವಿಸಿದ್ದ. ಸಾಯದೆ ಉಳಿದು ಪಾರಾಗಿ ತನ್ನ ಸೂಕ್ಷ್ಮತೆಯನ್ನು ಉಳಿಸಿಕೊಂಡಿದ್ದ. ಇವಾನ್‌ ಪಾತ್ರದ ಮೂಲಕ ತನ್ನ ಇಡೀ ಅನುಭವವನ್ನು ಒಂದು ದಿನದ ಆಗು ಹೋಗಿನಲ್ಲಿ ಪ್ರತಿಫಲಿಸುತ್ತಾನೆ. ಅವನು ಅಲ್ಲಿ ಯಾಕೆ ಬಂಧನದಲ್ಲಿದ್ದಾನೆ? ಕತೆಯ ಮೂರನೇ ಒಂದು ಭಾಗದವರೆಗೂ ಕತೆಗಾರ ಹೇಳುವುದಿಲ್ಲ. ನಂತರ ಅದನ್ನು ಸಹಜವಾಗಿ ಹೇಳುತ್ತಾನೆ. ಆದರೆ, ಅಷ್ಟರಲ್ಲಿ ಅದು ಗೌಣ ಎಂದು ಅನಿಸುವಲ್ಲಿಗೆ ಓದುಗ ಬಂದು ನಿಂತಿರುತ್ತಾನೆ. ಅದೊಂದು ಅಚ್ಚರಿ, ಆದರೆ ಸಹಜವೂ ಕೂಡ.

ನಮ್ಮ ವಯ್ಯಕ್ತಿಕದ ಆಚೆಗೆ ನಡೆಯುವ ಅನ್ಯಾಯ ನಮಗೂ ಸಂಬಂಧಪಟ್ಟಿದ್ದು. ಏಪೆಕ್ ಪ್ರೊಟೆಸ್ಟ್ ಬಗ್ಗೆ ನನ್ನನ್ನು ಪ್ರಶ್ನಿಸಿದವರಿಗೆ ಅದನ್ನು ಹೇಗೆ ಹೇಳಲಿ? ಮಾನವೀಯತೆ ಇಲ್ಲದ ಪರಿಸರ ನನ್ನ ಮಾನವೀಯತೆಯನ್ನೂ ಕಸಿದುಕೊಳ್ಳುತ್ತದೆ. ಹೇಗೆ ಅದನ್ನು ಅರ್ಥಮಾಡಿಸಲಿ? ಆರ್ಥಿಕ ಏಳಿಗೆಗೆ ಬಲಿಯಾಗುವವರು ಯಾರು? ಅವರು ಯಾಕೆ ಬಲಿಯಾಗಬೇಕು? ಈ ಪ್ರಶ್ನೆಗಳನ್ನೆಲ್ಲಾ ಹೇಗೆ ಉತ್ತರವನ್ನಾಗಿ ಮಾರ್ಪಡಿಸಿ ಪ್ರಶ್ನಿಸದವರ ಮುಂದೆ ಹಿಡಿಯಲಿ? ಒಳಗೊಳಗೇ ಇದೆಲ್ಲದರ ಜತೆ ಗುದ್ದಾಡುತ್ತಿದ್ದೇನೆ. ಆದರೆ ಹೊರಗೆ ನಗುತ್ತೇನೆ.

ವಸಂತದ ಬಿಸಿಲಿಗೆ ಮುಖವೊಡ್ಡಿ ಅಸಾಧಾರಣ ಸ್ವಾಸ್ಥ್ಯ ಅನುಭವಿಸುತ್ತೇನೆ. ವಸಂತಕ್ಕೆ ತಾನು ಕೊಂಚ ಬೇಗ ಬಂದುಬಿಟ್ಟೆನೆ ಎಂಬ ಅನುಮಾನ. ಮತ್ತೊಂದು ವಾರ ಮಳೆ, ಛಳಿ. ಜನರಿಗೂ ಕೊಂಚ ಗಲಿಬಿಲಿ. ನಿಜವಾಗಿಯೂ ಇದು ವಸಂತವೇ? ವಸಂತ ಬಂದು ಬಿಟ್ಟಿತೆ? ಮರೆತು ಬಿಟ್ಟೆನೆ? ವಸಂತವೆಂದರೆ ಇದೇನೆ? ಇದು ನೋಡಿ ಯಾವಾಗಲೂ ಹೀಗೆ. ಕಾಲ ಬದಲಾಗುವುದು ಸ್ವಿಚ್ ಹಾಕಿದ ಹಾಗಲ್ಲ. ವಿದ್ಯುತ ದೀಪ ಹಾಕಿ ಆರಿಸಿದಂತಲ್ಲ. ಅದು ನಿಧಾನಕ್ಕೆ ಅನುಮಾನದಿಂದ ಜರುಗುತ್ತದೆ. ಅದಕ್ಕೆ ಹಲವಾರು ಸಣ್ಣ ಸಣ್ಣ ಒತ್ತಡಗಳಿರಬೇಕಾಗುತ್ತದೆ. ಅದನ್ನು ನಾನು ನೀವು ತರಬೇಕಷ್ಟೆ. ಸಣ್ಣ ಸಣ್ಣ ಪ್ರಮಾಣದಲ್ಲಾದರೂ ಸರಿಯೆ.

ಸೋಲ್ಸನಿತ್ಸಿನ್ ವಿವರಿಸುವ ದಿನವೂ ಅದರ ಹಿಂದಿನ ದಿನದಿಂದ ಬೇರೆಯಾಗಿ ಕೊಯ್ದಿಟ್ಟದ್ದಲ್ಲ. ಹಿಮದಲ್ಲಿ ಇಡೀ ದಿನ ಒದ್ದಾಡಿ ರಾತ್ರಿ ತನ್ನ ಹಾಸಿಗೆಯ ಹರಕು ಬಟ್ಟೆ, ತೂತು ಕಾಲುಚೀಲಗಳಲ್ಲೇ ಶಾಖ ಹುಟ್ಟಿಸಿಕೊಳ್ಳುವುದು. ಮತ್ತೆ ರೋಲ್-ಕಾಲ್ ಕರೆದು ಬಿಟ್ಟಾರು ಎಂದು ಹೆದರುತ್ತಾ ದೇಹ ನಿದ್ದೆಗಿಳಿಯುವುದು. ಆ ನಿದ್ದೆಯೊಂದೆ ಹಿಂದಿನ ದಿನದಿಂದ ಮುಂದಿನ ದಿನವನ್ನು ಬೇರ್ಪಡಿಸುವುದು. ಓದುತ್ತಿರುವ ವಸಂತದಲ್ಲಿ ನನ್ನನ್ನು ಇವೆಲ್ಲಾ ನಡುಗಿಸುತ್ತದೆ. ಅವನಿಗೆ ನಿದ್ದೆ ಅಗತ್ಯ. ಆದರೆ ಇವಾನ್ ಮಾಡುವ ನಿದ್ದೆ ಎಚ್ಚರ ತುಂಬಿದ ನಿದ್ದೆ. ನಿದ್ದೆಯಲ್ಲೂ ತಪ್ಪು ಮಾಡಿಬಿಟ್ಟರೆ?

ಏಪೆಕ್ ಪ್ರೊಟೆಸ್ಟಿಗೆ ಹೋಗಲು ಏನು ಕಾರಣ ಎಂದು ಕೇಳುವುದೇ ಒಂದು ರಾಜಕೀಯ ಪ್ರಶ್ನೆ ಅನ್ನಿಸಿತು. ಹಲವಾರು ಕಾರಣ ಕೊಟ್ಟು ಸಮರ್ಥಿಸಿಕೊಳ್ಳಬಹುದು. ನಾನು ಅನ್ನುವ ಇದು, ನಾನೊಬ್ಬನೇ ಅಲ್ಲ. ನಾನು ನನ್ನ ಸಮುದಾಯ, ನಾನು ನನ್ನ ಸಮಾಜ ಕೂಡ. ಅದಕ್ಕೆ ಹಿಡಿದ ಹುಳುಕು ನನಗೂ ಹಿಡಿದ ಹಾಗೆ. ನಾನು ನಿದ್ದೆ ಮಾಡುತ್ತಿಲ್ಲ. ಎಚ್ಚರವಾಗಿದ್ದೀನಿ. ಹಾಗೆಂದು ನನಗೆ ನಾನೇ ಹೇಳಿಕೊಳ್ಳುವ ಒಂದು ವಿಧಾನ ಇದು. ಚೆನ್ನಾಗಿ ನಿದ್ದೆ ಮಾಡವಂಥ ಸ್ವಸ್ಧ ಪರಿಸರದಲ್ಲಿ ಏಕೆ ನಿದ್ದೆಗೆಡಬೇಕು? ಎಚ್ಚರ ಸವಲತ್ತಲ್ಲ. ಎಚ್ಚರ ಹೊಟ್ಟೆ ತುಂಬಿದವರ ಸೌಖ್ಯವಲ್ಲ. ಅದೊಂದು ಅಗತ್ಯ. ಅಸಹನೆಯನ್ನು ಹಂಚಿಕೊಳ್ಳುವುದೂ ಅಷ್ಟೆ.

ಸೋಲ್ಸನಿತ್ಸಿನ್ ಕತೆಯನ್ನು ೧೯೬೨ರಲ್ಲಿ ಸೋವಿಯತ್ ಪ್ರಧಾನಿ ಕೃಷೇವ್‌ನ ಪರವಾನಗಿ ಪಡೆದು ಪ್ರಕಟಿಸಿದರಂತೆ. ಅದು ಕಾಲಮಾನದಲ್ಲಿ ತುಂಬಾ ದೂರದ ಸಂಗತಿ. ರಾಜಕೀಯ ಪರಿಸ್ಥಿತಿಯಲ್ಲೂ ಕೂಡ. ಹಾಗಾಗಿಯೇ ಇವಾನ್ ಕತೆ ಚರಿತ್ರೆಯಂತೆ ಕಾಣುತ್ತದೆ. ಆದರೆ ಒಂದು ವಿಪರ್ಯಾಸ ನೋಡಿ. ಮರಣ ಪದ್ಯ ಕೂಡ, ಲೋಕದಲ್ಲೇ ಅತಿ ಹೆಚ್ಚು ಸ್ವಾತಂತ್ಯ್ರವಿರುವ ಅಮೇರಿಕದಂಥ ದೇಶದ ಆಡಳಿತದ ಪರವಾನಗಿ ಪಡೆದು ಪ್ರಕಟವಾಗಬೇಕಾಯಿತು.painting.jpg

ನೋಡಿ - ನಿದ್ದೆ ವಿಪರ್ಯಾಸಗಳನ್ನು ಒಂದಕ್ಕೊಂದು ಹೊಂದಿಸಿಬಿಡುತ್ತದೆ. ಅದನ್ನು ಕನಸಾಗಿ ಹೆಣೆದು ನಾವು ಅದರಲ್ಲಿ ಕಳೆದುಹೋಗುವಂತೆ ಮಾಡಿಬಿಡುತ್ತದೆ. ಎಚ್ಚರ ಮಾತ್ರ ಅದರೊಡನೆ ಗುದ್ದಾಡ ಬೇಕಾಗುತ್ತದೆ.

ವಸಂತದ ಅನುಮಾನ ಈಗ ವಿಷಾದವಾಗಿ ಕಾಡುತ್ತದೆ. ವಿಷಾದದಿಂದ ಕೈಚೆಲ್ಲದೆ, ವಿಷಾದವನ್ನು ಇಟ್ಟುಕೊಂಡೂ ಎಚ್ಚರವಾಗಿರುವುದು ಪಡಬೇಕಾದ ಪಾಡಷ್ಟೇ ಅಲ್ಲ. ಅದು ಜವಾಬ್ದಾರಿ ಕೂಡ. ಅದನ್ನು ನನಗೆ ನಾನೇ ಆಗಾಗ ಹೇಳಿಕೊಳ್ಳುವುದೂ ಮುಖ್ಯ. ಅದು ಯಾವ ರೀತಿಯಲ್ಲಾದರೂ ಆಗಬಹುದು.

ಇವಾನ್ ಹಿಮದ ಆಳದಲ್ಲಿ,
ವಸಂತಕ್ಕೆ ಎದುರು ನೋಡುತ್ತಾ,
ಸಣ್ಣಪುಟ್ಟ ಪ್ರತಿರೋಧವನ್ನು ತೋರಿಸುತ್ತಾ ಬದುಕುಳಿದ ಹಾಗೆ,
ತೋರಿಸಿದ್ದರಿಂದಲೇ ಬದುಕುಳಿದ ಹಾಗೆ…

ನಡೀವಾಗ ಯಾರಾದರೂ ಜತೆಗೆ ಬೇಕು.
ಬೇರೇ ಬೇರೇ ಸೂರ್ಯನ ಬೆಳಕಿಗೆ ಮೈಕಾಯಿಸಿಕೊಂಡಿದ್ದರೂ ಪರವಾಗಿಲ್ಲ. ಜತೆಗಿರಬೇಕು. ಜತೆಗಿರೋ ಮನಸ್ಸಿದ್ದರೂ ಸುಲಭ ಅಲ್ಲ. ಒಬ್ಬೊಬ್ಬರಿಗೆ ಒಂದೊಂದು ನಮೂನೆ ಕಾಲು. ಆನೆ ಕಾಲು, ಕುದುರೆ ಕಾಲು, ಇಲಿ ಕಾಲು. ಕೆಲವರಿಗೆ ಹಕ್ಕಿ ಕಾಲು. ಇನ್ನು ಕೆಲವರಿಗೆ ಕಾಲಿಲ್ಲದೇನೂ ಹೋಗತೀನಿ ಅನ್ನೋ ಹಾವಿನ ಛಲವೇ ಕಾಲು.
ತುಂಬಾ ದೂರದ ದಾರಿ;
ಏರು ಪೇರು;
ಹಳ್ಳ ಕೊಳ್ಳ;
ಬೆಟ್ಟ ಕಣಿವೆ;
ಟ್ರಾಫಿಕ್ಕು ಹೊಗೆ;
ತುಂಬಾ ಗೋಜಲಿನ ದಾರಿ;
ಸುಸ್ತಾದರೆ ಏನು ಮಾಡೋದು? ಕೇಳೋದು ಏನು ಬಂತು? ಜೇಬಿಂದ ಒಂದು ಮರ ತೆಗೆದು ನೆಟ್ಟುಕೊಂಡು, ಅದರ ನೆರಳಲ್ಲಿ ಕೂರೋದು. ಸೂರ್ಯನ ಝಳ ಜಾಸ್ತಿ ಆಯ್ತ? ಅವನನ್ನ ಸಮುದ್ರದಲ್ಲಿ ಮುಳುಗಿಸೋದು. ಜೋಳಿಗೆಯಿಂದ ಒಂದು ತುಂಡು ಚಂದ್ರನ್ನ ತೆಗೆದು ಮೋಡದ ಹಿಂದೆ ನೇತು ಹಾಕೋದು.
ರಸಿಕತೆ ಉಕ್ಕಿದರೆ ಇದ್ದೇ ಇದೆ;
ಹಾಡು ಪಾಡು;
ಜಗಳ ಪ್ರೀತಿ;
ಫೋಟೋ ಫಿಲ್ಮು;
ಕತೆ ಕಾವ್ಯ;
ರಸಿಕತೆ ಉಕ್ಕಿದರೆ ತಪ್ಪದೆ.
ಸೂರ್ಯ ಯಾವುದಾದರೇನು? ಕಾಲು ಯಾವುದಾದರೇನು?
ಜೇಬಲ್ಲಿ ಮರ ಇರಬೇಕು.
ಜೋಳಿಗೇಲಿ ಚಂದ್ರ ಇರಬೇಕು.
ನಡೀವಾಗ ಯಾರಾದರೂ ಜತೆ ಇರಬೇಕು.

ನಮ್ಮ ನಾಡಿನ ರಾಜಕೀಯ ಹದಗೆಟ್ಟಿದೆ. ರಾಜಕಾರಣಿಗಳಿಂದಾಗಿ ಎಲ್ಲ ಕೊಳೆತು ನಾರುತ್ತಿದೆ. ನಮ್ಮ ನಾಡಿನ ಜನರ ಕಷ್ಟ ಕಾರ್ಪಣ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಇವೆಲ್ಲಾ ನಿಜವೇ. ಆದರೆ, ಇದನ್ನೇ ಎಷ್ಟು ದಿನಾಂತ ಹೇಳ್ಕೊಂಡಿರೋಕೆ ಆಗತ್ತೆ ಹೇಳಿ. ಸಿಟ್ಟು ವಿಷಾದ ಇರಲಿ, ಕನಿಷ್ಟ ಬೋರಾದರೂ ಆಗಬೇಕಲ್ಲವ? ಬೋರು ಆಗತ್ತೆ ಅಂತೀರ? ಮುಂದೆ ಓದಿ »

ನನ್ನ ಚಿತ್ರ ಬರಿಯೋದು ತುಂಬಾ ಸುಲಭ. ಸುಲಭ ಅಂದ ತಕ್ಷಣ ನನಗೆ ಬರಿ ಎರಡೇ ಆಯಾಮ ಅನ್ಕೋಬೇಡಿ. ಮೂರು ಆಯಾಮಾನೂ ಇದೆ. ಜಾಸ್ತಿ ಕೇಳಿದರೆ ನಾಕನೇ ಐದನೇ ಆಯಾಮಕ್ಕೂ ಚಾಚಿಕೋಬಹುದು. ಆದರೂ ಸ್ವಲ್ಪ ಹತ್ತಿರದಿಂದ ನೋಡಿದರೆ ಸಾಕು ತಕ್ಷಣ ನನ್ನ ಒಳಗೆಲ್ಲ ಗೊತ್ತಾಗೋ ಥರ ಚಿತ್ರ ಬರೀಬಹುದು.

ಓಕೆ. ಹೇಗಪ್ಪ ಅಂತ ತಲೆ ಕೆರಕೋಬೇಡಿ. ಹೀಗ್ಮಾಡಿ - ಮದ ಮತ್ಸರ ಲೋಭ ಮೋಹ ಎಲ್ಲಾನೂ ಒಂದು ಚೂರು ಚೂರು ಕತ್ತರಿಸಿ ಜೋಡಿಸಿ. ನೆಟ್ಟಗೆ ನೀಟಾಗಿ ಪಕ್ಕ ಪಕ್ಕದಲ್ಲಿ ಜೋಡಿಸಬೇಡಿ. ಒಂದರ ಮೇಲೆ ಇನ್ನೊಂದು ಇರಬೇಕು. ಲೋಭದ ಮೇಲೆ ವಕ್ರವಾಗಿ ಮದ. ಮೋಹದ ಮೂಲೆನಲ್ಲಿ ಮತ್ಸರ. ಹೀಗೆ ಸ್ವಲ್ಪ ಓರೆ ಕೋರೆ ಮಾಡಿ ಜೋಡಿಸಿ. ಎರಡು ಕಣ್ಣಗಳೂ ಸಮವಾಗಿ ಗುಂಡಗೆ ಇಡಬೇಡಿ. ಒಂದು ಸ್ವಲ್ಪ ಆಚೆಗಿಡಿ. ಒಂದು ಕಣ್ಣು ದೂರದಲ್ಲಿರೋದನ್ನ ಎವೆಯಿಕ್ಕದೆ ನೋಡೋ ಹಾಗೆ ಇದ್ದರೆ, ಮತ್ತೊಂದು ಕುರಿ ಕಣ್ಣು ಇಟ್ಟ ಹಾಗೆ ಇರಬೇಕು. ಯಾವ ಕಣ್ಣು ಹ್ಯಾಗೆ ಅಂತ ನಿಮಗೆ ನನ್ನನ್ನ ನೋಡಿದ ತಕ್ಷಣ ಗೊತ್ತಾಗತ್ತೆ. ಹಾಗೆ ಒಳ್ಳೆ ಉದ್ದನೆ ಮೂಗು ಬರೀಬೇಡಿ. ನಂದು ಮೊಂಡು. ಅಲ್ಲಲ್ಲಿ ಕೀರಿದ ಗಾಯ ಇದೆ ಮೂಗಿನ ಮೇಲೆ. ಅದನ್ನು ಮುಜುಗರ ಪಟ್ಕೊಂಡು ನೋಡದೇ ಇರಬೇಡಿ. ಬಾಯೂ ಅಷ್ಟೆ ಒಳ್ಳೇ ಗೆರೆಗಳೇನೂ ಬೇಡ. ತುಟ್ಟಿ ಹರಿದಿದೆ. ಒಂದೊಂದು ಸಲ ಅದಕ್ಕೆ ಪಿನ್ನು ಹಾಕಿಕೊಳ್ಳಬೇಕಾಗತ್ತೆ.

ಈಗ ಕರುಣೆ ಅಸಹ್ಯ ಭಯ ಎಲ್ಲಾ ದೂರಕ್ಕಿಡಿ. ಅಷ್ಟೇ ಅಲ್ಲ ತಮಾಷೆ, ದುಃಖ, ಸಿಟ್ಟು ಎಲ್ಲಾ ಮರೆತು ನನ್ನ ಅವತಾರ ನೋಡಿ. ಬರೆಯೋಕೆ ಮನಸ್ಸು ಆದರೆ, ಬರೀಯೋಕೆ ಆಗತ್ತೆ ಅನ್ನಿಸಿದರೆ ಬಣ್ಣ ಬ್ರಶ್ಶು ತಗೊಳ್ಳಿ ನಾನು ಬಂದು ನಿಮ್ಮ ಮುಂದೆ ಮಗು ಥರ ಕೂತ್ಕೋತೀನಿ.

ದೊಡ್ಡಕ್ಕೆ ಮುಖ ಬರೆದು ಅದಕ್ಕೆ ಚೆನ್ನಾಗಿ ಬಣ್ಣ ಬಳಿರಿ.
ಓರೆ-ಕೋರೆ, ಹರಿದ ತುಟಿ, ಮೂಗಿನ ಗಾಯ, ಕುರಿ ಕಣ್ಣು ಇದೆಲ್ಲಾ ಯಾರಿಗೂ ಕಾಣದ ಹಾಗೆ ಮಾಡಿಬಿಡಿ.
ಹಾಗೇ ಮುಖಕ್ಕೆ ಅಡಿಪಾಯದಂತಿದೆಯಲ್ಲ ಈ ಮದ ಮತ್ಸರ ಲೋಭ ಮೋಹ ಅದನ್ನೂ ಮುಚ್ಚಿಬಿಡಬೇಕು.
ಆವಾಗ ಎಲ್ಲಾರಿಗೂ ಇಷ್ಟ ಆಗೋ ಅಂತ ನನ್ನ ಚಿತ್ರ ತಯಾರಾಗತ್ತೆ.

ಹುಡುಕಾಟಕ್ಕೆ ಇನ್ನೊಂದು ಪದವೆನ್ನುವಂತಿರುವ ಗೂಗಲ್ ಏಕತಾನಕ್ಕೆ ತಿರುಗುತ್ತಿದೆ ಎಂಬ ತಲ್ಲಣ. ಆಗೊಮ್ಮೆ ಈಗೊಮ್ಮೆ ವಿಚಿತ್ರಗಳನ್ನೂ ಏಕತಾನದಲ್ಲಿ ಹೊರಗೆಡವುತ್ತಿದೆ. ಎಷ್ಟೋ ಸಲ ನಾನು ಬೇಕೆಂದು ಹುಡುಕಿದ್ದೇ ಸಿಗುತ್ತದೆ. ಅಷ್ಟೇ ಅಲ್ಲ ನನಗೆ ಇಷ್ಟವಾಗುವುದೇ ಸಿಗುವುದು ಕೂಡ ಸೋಜಿಗ ಅನಿಸುತ್ತಿಲ್ಲ.

ಗೂಗಲ್ ಹುಡುಕಾಟದ ಮೊದಲ ಪುಟದಲ್ಲಿ ಸಿಕ್ಕದೇ ಹೋಗುವ ಸಂಗತಿಗಳು, ಸಿಗಬೇಕಾದ ಎಷ್ಟೋ ಸಂಗತಿಗಳು ಈಗೀಗ ಕಾಡುತ್ತಿದೆ. ಸರ್ಚ್ ಇಂಜನ್ನಿನ ಶಕ್ತಿ ಬೆಳೆದಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ಹೆಚ್ಚು ಹೆಚ್ಚು ದಾಖಲೆಗಳನ್ನು ಅದು ಹುಡುಕುವ ಸಾಮರ್ಥ್ಯ ಬೆಳೆದಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ಸರ್ಚ್ ಇಂಜನ್ನು ಸೂಕ್ಷ್ಮವಾದಷ್ಟೂ, ನಾನು ಬರೆದ ಪದ ಸರಿಯಾಗಿದ್ದರೂ “ಹೀಗೆ” ತಿದ್ದಲೇ ಎಂದು ಸೂಚಿಸುವ ಜಾಣ್ಮೆ ಅದರಲ್ಲಿ ಕಂಡಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ನನಗೆ ಬೇಕಾದ್ದನ್ನು ಸೂಚಿಸುವ ಪದ ಟೈಪ್ ಮಾಡದೇ ಬೇರೇನೋ ಟೈಪ್ ಮಾಡಿದರೂ ನನ್ನ ಮನಸ್ಸನ್ನು ಅರಿತುಕೊಂಡು ಬೇಕಾದ್ದನ್ನೇ ನೀಡುವಷ್ಟು ನಿಖರವಾಗಿದ್ದರೂ ಯಾಕೆ ಈ ಆತಂಕ ಹೆಚ್ಚುತ್ತಿದ್ದೆ?

ಒಮ್ಮೊಮ್ಮೆ ಗೂಗಲ್ ಕಕ್ಕದೇ ಇದ್ದದ್ದು ಇಲ್ಲವೇ ಇಲ್ಲ ಎಂಬ ವಾದ ಕೇಳಿ ಮೈನಡುಗುತ್ತದೆ. ಅದು ಕಕ್ಕಿದ್ದೇ ವೇದ ವಾಕ್ಯ ಎಂಬ ವಾದವೂ ಸಹ. ಯಾವ ವಾದಕ್ಕೆ ಬೇಕಾದರೂ ಪುರಾವೆ ಸಿಕ್ಕುವ ಈ ಹುಡುಕಾಟದ ಯುಗದಲ್ಲಿ ಸಮುದ್ರ ಮಥನ ನೆನಪಾಗುತ್ತದೆ.

ಚಿಲಿಯ 9/11 ಬಗ್ಗೆ ಹುಡುಕುವುದು ಯಾಕೆ ಕಷ್ಟ? ‘other 9/11′ ಎಂದಾಗ ಅದು ಸಿಕ್ಕಿ ನೆನಪಿಸಿತು - ಈ other, ಈ ಬೇರೆ, ಈ ಅಲ್ಲದ್ದು ಎಷ್ಟು ಮುಖ್ಯ! other ಇಲ್ಲದೆ, ಬೇರೆ ಇಲ್ಲದೆ, ಅಲ್ಲದ್ದು ಇಲ್ಲದೆ this, ಇದು, ಹೌದೆನಿಸುವುದಕ್ಕೆ ಅರ್ಥವಿಲ್ಲ!

ಕಡೆಗೂ “ಸಿಕ್ಕಿಬಿಡುವುದನ್ನು” ಮೀರಬೇಕು. ಬೇಕಾದ್ದನ್ನು ಹುಡುಕುವ ತವಕ ಬಿಟ್ಟುಕೊಡಕೂಡದು. ಒಂದು ರೀತಿಯ ಮಂಜುಗಡ್ಡೆಯಂಥ ಛಲ ಹತ್ತಿಕೊಳ್ಳುತ್ತದೆ. ಮೈಯೆಲ್ಲಾ ಥರಥರ ನಡುಗಿಸುವಂಥದ್ದು ಅದು.

ನಾನು ಯಾರಾಗಿದ್ದೀನಿ?
ಇದಕ್ಕೆ ಆನ್ಸರಿಸುವ ಕೆಲಸವನ್ನು ಆಧ್ಯಾತ್ಮಿಗಳು ಹೈಜಾಕ್ ಮಾಡೋಕೆ ಬಿಡಬಾರದು. ಅವರನ್ನು ಸ್ಟಾಪ್ ಮಾಡೋಕೆ ಆಗದೇ ಇರೋದರಿಂದ ಅವರು ಗಿಣಿಪಾಟ ಒಪ್ಪಿಸೋ ಡಲ್ಲಾದ ಆನ್ಸರ್‍ಗಿಂತ ಸಕತ್ತಾದ ಆನ್ಸರ್‍ಗಳನ್ನು ನಾವೇ ಹುಡುಕೊಂಡು ಬಿಡಬೇಕು.
ಫಸ್ಟ್, ಪರ್ಸನಲ್‌ ಆಗಿ ನೋಡಿದರೆ; ನೆನ್ನೆನೋ, ಟೆನ್ ವರ್ಷದ ಮುಂಚೆನೋ ಹೇಗಿದ್ದೆ, ಹೇಗೆ ತಿಂಕ್ ಮಾಡ್ತಿದ್ದೆ, ಈಗ ಹೇಗೆ ತಿಂಕ್ ಮಾಡ್ತೀನಿ ಅಂತ ಫೈಂಡೌಟ್ ಮಾಡಿಕೊಂಡರೆ ಸೆವೆರಲ್ ವಿಷಯಗಳು ಗೊತ್ತಾಗಿ ಬಿಡಬಹುದು.
ಇನ್ನು ನಮ್ಮ ಕಮ್ಯುನಿಟಿನಲ್ಲಿ ನಾನು ಯಾರಾಗಿದ್ದೆ. ನನ್ನ ಜನರ ಜತೆ ಯಾವ ಥರ ರಿಲೇಟ್ ಮಾಡ್ಕೋತಾ ಇದ್ದೆ. ಅವರ ಹ್ಯಾಪಿನೆಸ್ಸು ವರೀಸು ಹೇಗೆ ತಿಳಿಕೋತಾ ಇದ್ದೆ, ಈಗ ಹೇಗೆ ತಿಳ್ಕೋತಾ ಇದ್ದೀನಿ ಇದು ಇಂಪಾರ್ಟೆಂಟು.
ನೆಕ್ಸ್‌ಟು-ನಮ್ಮ ಸಮಾಜದಲ್ಲಿ ನಾನು ಯಾರಾಗಿದ್ದೆ. ನಮ್ಮ ಸಮಾಜದ ಪೀಪಲ್ಸ್‌ನಲ್ಲಿ ಯಾರು ನನಗೆ ಕರೆಕ್ಟ್ ಅನ್ಸತ್ತೆ. ಯಾರು ಹೋಪ್‌ಲೆಸ್ ಅನ್ಸತ್ತೆ. ಹೀಗೇ ಬಿಫೋರೂ ಅನ್ನಿಸ್ತಾ ಇತ್ತ? ಆರ್‍, ಈಗ ಡಿಫರೆಂಟ್ ಆಗಿ ಅನ್ಸತ್ತ? ಅಂತ ನೋಡಿಕೋಬೌದು.
ಫಿನಿಷ್ ಅನ್ಕೊಂಡರ?
ಇನ್ನೊಂದೆರಡು ಸ್ಟೆಪ್ಸ್ ಇದೆ.
ನಮ್ಮ ಕಂಟ್ರಿನಲ್ಲಿ ನಾನು ಯಾರಾಗಿದ್ದೆ, ಈವಾಗ ಯಾರಾಗಿದ್ದೀನಿ? ನಮ್ಮ ನೇಷನ್‌ನ ಯಾವ ಲೇಯರ್‌ಗೆ ನಾನು ಸೇರ್‍ತಿದ್ದೆ, ಈವಾಗ ಯಾವ ಲೇಯರ್‌ಗೆ ಅಡ್ಚಸ್ಟ್ ಆಗ್ತೀನಿ? ಇದನ್ನ ನೋಡಿಕೊಂಡರೂ ಪ್ರಾಫಿಟ್ ಇದೆ.
ಫೈನಲ್ಲಾಗಿ, ವರ್ಲ್‌ಡ್‌ನ ಎಲ್ಲ ಜನರನ್ನು ಕೌಂಟಿಗೆ ತಗೊಂಡರೆ ನಾನು ಎಲ್ಲಿ ಏನು ಯಾರಾಗಿದ್ದೀನಿ? ಇದೂ ವೆರಿ ವೆರಿ ಇಂಪಾರ್ಟೆಂಟ್.
ಹೀಗೆಲ್ಲಾ ಫೈಂಡೌಟ್ ಮಾಡಿಕೊಳ್ಳೊಕೆ ಹೋದರೆ ಕನ್ಫ್ಯೂಸ್ ಆಗತ್ತೆ ಅಂತ ವರಿ ಮಾಡಿಕೊಬೇಡಿ. ಏನೂ ಆಗಲ್ಲ. ಸ್ಟೆಪ್-ಬೈ-ಸ್ಟೆಪ್ ಹೋಗಬೇಕು ಅಷ್ಟೆ.

ನಾನು ಹೂ ಆಗಿದ್ದೀನಿ? ಒಳ್ಳೆ ಕ್ವೆಸ್ಚೆನ್ ಅಲ್ವ?

ಸಿಡ್ನಿಯಲ್ಲಿ ಚಳಿಗಾಲ ಕೊನೆಗಾಣುವ ದಿನಗಳಿವು. ಕಡೆಯ ಸಲ ತಬ್ಬಿ ಬೀಳ್ಕೊಡುವಂತೆ ಹೊರಗೆ ಮಂಜು ತಬ್ಬಿದೆ ನೆಲವ, ಮೌನ ತಬ್ಬುವ ಹಾಗೆ. ಇಲ್ಲೇಕೆ ಅಡಿಗರು ಬಂದರು ಎಂದು ಚಕಿತಗೊಳ್ಳುತ್ತೇನೆ. ಅವರ ಹಿಂದೆಯೇ ರಾಜರತ್ನಂ ಕೂಡ ಕಾಣಿಸಕೊಂಡರು ತಬ್ಬುವ ಮೋಡಿಗೆ ಮಡಕೇರಿಯಲ್ಲಿ ಮುಗ್ಧರಾಗುತ್ತಾ. ಎಲ್ಲಿ ಹೋದರೂ ಬಿಡದ ಇವರೆಲ್ಲರ ಸಾಂಗತ್ಯದ ಅದೃಷ್ಟ.
ದಟ್ಟವಾಗಿ ಮುಚ್ಚಿದ ಮಂಜಿನ ನಡುವೆ ನೆರಳುಗಳಂತೆ ಸರಿದಾಡುವ ಜನ. ನೀರವ. ಎಲ್ಲರೂ ಪಿಸುಗುಡುತ್ತಿರುವಂತೆ ಅನಿಸುತ್ತಿದೆ. ಜೋರಾಗಿ ಮಾತಾಡಿದರೆ ಎಲ್ಲಿ ಮಂಜು ಚದುರಿಬಿಡುತ್ತದೋ, ಚಳಿಗಾಲ ಓಡಿಬಿಡುತ್ತದೋ ಎಂಬ ಅಂಜಿಕೆಯೆ? ಚಳಿಗಾಲದಲ್ಲಿ ನಲಿಯುವ, ಚಳಿಯನ್ನು ಪ್ರೀತಿಸುವ ಜನರಿವರು. ಈಗೀಗ ನಾನೂ…?

ಹತ್ತಾರು ಅಡಿಗಳಾಚೆ ಏನೂ ಕಾಣದ ಮಂಜು. ರೈಲು ಬಂತೇ ಎಂದು ಬಿಳಿಯ ಗೋಡೆಯಲ್ಲಿ ಹುಡುಕುವ ಕಣ್ಣುಗಳು. ಕಣ್ಣಿಗೆ ಬೀಳುವ ಎಷ್ಟೋ ಮುಂಚೆ ರೈಲಿನ ಸದ್ದು ಎಲ್ಲರಿಗೂ ಕಚಗುಳಿಯಿಟ್ಟಾಗ ನನಗೆ ಕಾಣಿಸಿದ್ದು-
‘ಹಬ್ಬಿರುವ ಮಬ್ಬಿನೊಳಗೊಬ್ಬನೇ ಮುದುಕ
ಕೋಲೂರಿ ನಡೆದಿದ್ದಾನೆ’
ಗಾಂಧಿ ಶತಮಾನೋತ್ಸವದಲ್ಲಿ ಶಿವರುದ್ರಪ್ಪ ಬಂದಾಡುತ್ತಾರೆ. ಗಾಂಧಿ ಕತ್ತಲೆಯಲ್ಲಿ ಧಡಗುಟ್ಟಿ ಬರುವ ರೈಲಿನ ಹಾಗೆ, ಬಂದು ಹಾಗೇ ಕತ್ತಲಲ್ಲಿ ಲೀನವಾಗುವ ಹಾಗೆ ಎಂದಿದ್ದಾರಲ್ಲವೆ? ಸಾಲುಗಳು ನೆನಪಿಲ್ಲ. ಆದರೆ ಪ್ರತಿಮೆ ತಲೆಯಲ್ಲಿ ಸುಳಿದಾಡುತ್ತದೆ.

ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಆಸ್ಟ್ರೇಲಿಯಾದ ಆದಿನಿವಾಸಿಗಳು ಗಾಂಧಿಯ ಬಗ್ಗೆ ಚಿಂತಿಸಿದ್ದರಂತೆ. ಬ್ರಿಟೀಷರ ಎದುರು ಗಾಂಧಿಯ ಪ್ರತಿರೋಧ, ಚಳವಳಿಗಳು ತಮಗೂ ಮಾದರಿಯಾಗಬಲ್ಲವೆ ಎಂದು ಚರ್ಚಿಸಿದ್ದರಂತೆ. ಅದರ ಬಗ್ಗೆ ಇನ್ನಷ್ಟು ಓದಬೇಕು ಎಂದು ಮನಸ್ಸಿನ ಮೂಲೆಯಲ್ಲಿ ಒಂದು ಪುಟ್ಟ ಗುರುತು ಹಾಕಿಕೊಳ್ಳುತ್ತೇನೆ. ಅಂದಿಗೂ-ಇಂದಿಗೂ, ಅಲ್ಲಿಗೂ-ಇಲ್ಲಿಗೂ ಕೊಂಡಿ ಹುಡುಕುವುದು, ಅಂದಿಗೂ-ಇಂದಿಗೂ-ಅಲ್ಲಿಗೂ-ಇಲ್ಲಿಗೂ ಸಲ್ಲುವ ಒಂದು ದಾರಿ ಅನಿಸುತ್ತದೆ. ಅರವತ್ತರ ದಶಕದ ಅಬಾರಿಜಿನಗಳ “freedom ride”, ನಂತರ ಅವರಿಗೆ ಸಿಕ್ಕ ಓಟಿನ ಹಕ್ಕು, ಅಬಾರಿಜಿನಿ ಸಮುದಾಯದ ಬದುಕನ್ನು ಚೆನ್ನಾಯಿಸಿತೆ? ಗಾಂಧಿ ನಮಗಿಂದು ಎಷ್ಟು ದಕ್ಕುತ್ತಾರೆ? ದಕ್ಕಲೇಬೇಕೆ?

ಇನ್ನೂ ಮಂಜು ಚದುರಿಲ್ಲ. ಆದರೂ ಹಕ್ಕಿಗಳಿಗೆ “ಋತುಗಳ ರಾಜ ವಸಂತ” ಬರುತ್ತಿದ್ದಾನೆ ಎಂದು ಗೊತ್ತಾಗಿಬಿಟ್ಟಿದೆ. (ಯಾರದು-ಬಿಎಂಶ್ರಿ-ಅನುವಾದ?).

ಮರಿಹಕ್ಕಿಗಳು ಎಡೆಬಿಡದೆ ಚಿಲಿಪಿಲಿ ಅನ್ನುತ್ತಲೇ ಇವೆ.

ಎಲ್ಲಿಯ ಯಾವ ವಾಸನೆ ತಟ್ಟಿ ಎಬ್ಬಿಸಿದೆ ಅವನ್ನು?

ಎರಡು ತರ ಖುಷಿ ಇದೆ. ಎರಡೂ ಪ್ರಶ್ನೆಗಳಿಂದ ಹುಟ್ಟೋ ಖುಷಿ. ಪ್ರಶ್ನೆಗಳಲ್ಲೇ ನಿಂತು ಹೋಗೋ ಖುಷಿ. ಯಾಕೆಂದರೆ ಉತ್ತರದಲ್ಲಿ ವಿವರಣೆ ಇದೆ, ಆದರೆ ಖುಷಿ ಇಲ್ಲ. ಪ್ರಶ್ನೆಗಿಂತ ಉತ್ತರ ವಿಪರೀತ ಬೋರಿಂಗ್.
ಮೊದಲನೇ ಪ್ರಶ್ನೆ - ನೀನು ಈ ದೇಶದಲ್ಲೇ ಹುಟ್ಟಿದ್ದ? ಪ್ರಶ್ನೆ ಹಿಂದಿನ ಯೋಚನೆ ಗಮನಿಸಿ. ನುಡಿ, ನಡೆವಳಿಕೆ, ತಿಳವಳಿಕೆ ಇದೆಲ್ಲದರ ಮೇಲೆ ಅವರ ತೀರ್ಪು ಈ ಪ್ರಶ್ನೆ ರೂಪದಲ್ಲಿ ಧುತ್ತಂತ ಎದುರಾಗತ್ತೆ. ಈ ದೇಶದಲ್ಲಿ ಹುಟ್ಟದೇ ಇರೋನಿಗೆ ಅದು ರಾಜಕೀಯವಾದ ಪ್ರಶ್ನೆನೂ ಆಗಬಹುದು. ಉತ್ತರ ಕೊಡೋಕೆ ಇಷ್ಟ ಇಲ್ಲದೇ ಇರೋ ಪ್ರಶ್ನೆನೂ ಆಗಬಹುದು. ಅದೇನೇ ಆದರೂ ಈ ಪ್ರಶ್ನೆ, ಮತ್ತು ಉತ್ತರದ ಅಪೇಕ್ಷೆಯ ಸಂವಾದದಲ್ಲಿ ಒಂದು ಬಗೆಯ ಖುಷಿಯಿದೆ, ಮಜಾಯಿದೆ.

ಎರಡನೇದು - ನೀನು ಈ ದೇಶಕ್ಕೆ ಬಂದು ಎಷ್ಟು ದಿನ ಆಯಿತು? ಇದು “ನೀನು ಈ ದೇಶದಲ್ಲೇ ಹುಟ್ಟಿದ್ದ?” ಅನ್ನೋದಕ್ಕಿಂತ ಸಕ್ಕತ್ ಖುಷಿ ಕೊಡೋ ಪ್ರಶ್ನೆ. ಬೇಜಾನ್ ಒಳತಿರುವುಗಳಿರೋ ಪ್ರಶ್ನೆ. ಏಕ್‌ದಂ ಉತ್ತರಕೊಡೋ ಬದಲು ಪ್ರಶ್ನೆಗೊಂದು ಪ್ರಶ್ನೆ ಎಸೀಲಾ ಅಂತ ಇರಾದೆ ಹುಟ್ಟಿಕೊಳ್ಳತ್ತೆ. ಆ ಇರಾದೆ ತೋರಿಸಿಕೊಳ್ಳೋದು ಕುಚೋದ್ಯವಾಗಿ. “ದಿನಗಳಲ್ಲಿ ಬೇಕಾ ಗಂಟೆಗಳಲ್ಲಿ ಬೇಕಾ” ಅಂತ ಕೇಳೋದಕ್ಕೆ ಒಂದರೆ ಕ್ಷಣ ಯೋಚನೆ ಮಾಡ್ತೀನಿ. ಇದ್ದಕ್ಕಿದ್ದ ಹಾಗೆ ಅಷ್ಟೊಂದು ರಾಜಕೀಯ ಯಾಕೆ ಅಂತ ಮುಚ್ಕೋತೀನಿ. ಆದರೂ ನಾನು ಕಟ್ಟಿಕೊಂಡು ಬಂದಿದ್ದು ಇನ್ನೂ ಕಾಣತಲ್ಲ ಅಂತ ತಕತಕ ಕುಣೀತೀನಿ.

ಉತ್ತರ ಮಾತ್ರ ವಿಪರೀತ ಬೋರಿಂಗ್ ಅಂದೆ ಆಲ್ಲವ? ಏನಾದರೂ ಮಾಡಿ ಆಸಕ್ತಿ ಹುಟ್ಟಿಸಬೇಕು ಅಂತ ಶುರು ಮಾಡ್ತೀನಿ:
“ನಾನು ಎಲ್ಲಿ ಹುಟ್ಟಿದ್ದೋ ಗೊತ್ತಿಲ್ಲ. ಹಸುಳೆ ಆಗಿದ್ದಾಗ ಯಾರೋ ಧೂರ್ತ ರಾಜನ ಕಾಟ ತಡೆಯೋಕೆ ಆಗದೆ ನನ್ನ ಅಪ್ಪ-ಅಮ್ಮ ರಾತ್ರೋ ರಾತ್ರಿ ಪುಟ್ಟ ದೋಣೀಲಿ ತಪ್ಪಿಸಿಕೊಂಡರಂತೆ. ಅದು ಬಿರುಗಾಳಿಗೆ ಸಿಕ್ಕಿ ಮುಳುಗೋ ಹಾಗೆ ಆಗಿತ್ತಂತೆ. ಆವಾಗ ದೂರದಲ್ಲಿ ಒಂದು ಸುಭಿಕ್ಷ ದೇಶ ಕಾಣಿಸ್ತಂತೆ. ಆದರೆ ಹತ್ತಿರ ಹೋಗುತ್ತಲೂ, ಆ ದೇಶದ ದೊಡ್ಡ ಹಡಗು ನಮ್ಮ ದೋಣೀನ ಕಾಪಾಡೋದು ಬಿಟ್ಟು, ಅವರ ರಾಜನ ಅಪ್ಪಣೆ ಮೇರೆಗೆ, ದೊಡ್ಡ ಕೋಲಿಂದ ‘ಬರಬೇಡಿ ಹೋಗಿ’ ಅಂತ ದೂರಕ್ಕೆ ತಳ್ಳಿದರಂತೆ. ಆ ದೇಶದ ಹಡಗು ಅತ್ತಲಾಗಿ ಹೋಗುತ್ತಲೂ ನಮ್ಮ ದೋಣಿ ಮುಳುಗಿ ಹೋಯ್ತಂತೆ. ಅದಕ್ಕೆ ನನ್ನ ಅಪ್ಪ-ಅಮ್ಮನ ಮುಖ ನಾನು ನೋಡೇ ಇಲ್ಲ. ನಾನು ಸೊಳ್ಳೆ ಪರದೆ ಗಂಟಿನ ಮೇಲೆ ತೇಲಿಕೊಂಡು ಆ ಸುಭಿಕ್ಷ ನಾಡಿನ ಚಿನ್ನದಂಥ ಕಡಲತಡೀಲಿ ಯಾರದೋ ಕೈಗೆ ಸಿಕ್ಕನಂತೆ. ಅವರು ಮೊದಲು ಯಾವುದೋ ಪ್ರಾಣಿ ಅಂತ ನನ್ನನ್ನ ಮುಟ್ಟೋಕೂ ಹೆದರಿಕೊಂಡು ಆಮೇಲೆ ಮನಸ್ಸು ಬದಲಾಯಿಸಿ ಮನೆ ಒಳಗೆ ಇಟ್ಟಕೊಂಡು ಪ್ರೀತಿಯಿಂದ ಸಾಕಿದರಂತೆ. ಒಂದು ಚೂರು ದೊಡ್ಡೋನಾಗತಲೂ ಕಟ್ಟಿಹಾಕೋ ಅವರ ಪ್ರೀತಿಯಿಂದ ತಪ್ಪಿಸಿಕೊಂಡು ಮತ್ತೆ ನನ್ನ ನಾಡಿಗೆ ಓಡಿ ಹೋಗಿ ದೊಡ್ಡೋನಾದ ಮೇಲೆ ಈಗಷ್ಟೆ ಬಂದು ಇಲ್ಲಿ ಇಳಿದೆ.”

ನನ್ನ ತಲೆ ಸಾವಿರ ಹೋಳಾಗದೆ ಇರೋದು ಆಶ್ಚರ್ಯ ಅಲ್ಲ ಅಲ್ಲವೆ?

ಇದ್ದಕಿದ್ದ ಹಾಗೆ ಬಣ್ಣದ ಪಲ್ಯ ಮಾಡೋಣ ಅಂತ ಮನಸಾಯಿತು. ಬಾಣಲಿಯಲ್ಲಿ ಒಂದಷ್ಟು ಬಣ್ಣ ಉದುರಿಸಿ, ತಟಕ್ಕು ಎಣೆ ಹಾಕಿ ಹುರಿಯೋಕೆ ಶುರು ಮಾಡಿದೆ. ಹುರಿದಾಗ ಬಣ್ಣಗಳೆಲ್ಲಾ ಒಂದೇ ರೀತಿ ಆಗಲ್ಲ. ಒಂದೊಂದು ಬಣ್ಣ ಒಂದೊಂದು ರೂಪ ರಾದ್ಧಾಂತ ಮಾಡ್ಕೋತಾವೆ. ಕೆಲವು ಮುರುಟಿಕೊಂಡರೆ ಕೆಲವು ಅರಳಕೋತಾವೆ. ಕೆಲವು ಹರಡಿಕೊಂಡರೆ ಇನ್ನು ಕೆಲವು ಸುರಟಿಕೋತಾವೆ. ಒಟ್ಟಿನಲ್ಲಿ ಏನೋ ಒಂದು ಹದ ಅಂತೂ ಇರತ್ತೆ. ಮುರುಟಿಕೊಂಡಿದ್ದು ಅರಳಿಕೊಂಡಿದ್ದು ಪಕ್ಕಪಕ್ಕದಲ್ಲಿ ಬಿದ್ದುಕೊಂಡು ಕಷ್ಟಸುಖ ಮಾತಾಡಿಕೋತಾ ಇರೋದು ನೋಡೋಕೆ ತುಂಬಾ ಚೆನ್ನಾಗಿರತ್ತೆ. ಕೆಲವು ಬಣ್ಣಗಳು ಬದಲಾಗ್ತಾ ಬಿಳಿಯಾಗ್ತಾವೆ, ಇನ್ನು ಕೆಲವು ಕಪ್ಪಾಗ್ತಾವೆ. ಆದರೆ ಮಜಕೊಡೋದು ಯಾವುದು ಗೊತ್ತಾ? ಹುರೀತಾ ಹುರೀತಾ ದಟ್ಟವಾಗ್ತಾ ಹೋಗವು.
ಆದರೂ ಬಾಣಲಿಯ ಬಣ್ಣದ ಪಲ್ಯದಲ್ಲಿ ಯಾಕೋ ಏನೋ ಸರಿಯಿಲ್ಲ ಅನ್ನಿಸಿ ಏನಿರಬಹುದು ಅಂತ ಯೋಚಿಸ್ತಾ ಬಾಣಲೀನ ದಿಟ್ಟಿಸ್ತಾ ಹುರೀತಿದ್ದೆ. ಇನ್ನು ಹೆಚ್ಚು ಹುರಿದರೆ ಕೆಟ್ಟು ಹೋಗತ್ತೆ ಅಂತ ಬೇರೆ ಚಿಂತೆ ಹತ್ತಿಕೋತು. ಹುರಿಯೋದು ಸಾಕು ಅನ್ನಿಸಿದರೂ ಇನ್ನೇನೋ ಒಂದು ಬಣ್ಣ ಕಡಿಮೆ ಆಗಿದೆ ಅಂತ ಒಳಗೊಳಗೇ ಒದ್ದಾಡ್ತಿದ್ದೆ. ನೀಲಿ ಇರಬಹುದ ಅಂತ ಹೊರಗಿನ ಆಕಾಶ ನೋಡಿದೆ. ಹಸಿರು ಇರಬಹುದ ಅಂತ ದೂರದ ಹುಲ್ಲುಗಾವಲು ನೋಡಿದೆ. ಕೆಂಪು ಇರಬಹುದಾ ಅಂತ ಉರೀತಿದ್ದ ಸೂರ್ಯನ್ನ ನೋಡಿದೆ. ಹಳದಿ ಇರಬಹುದ ಅಂತ ಉದುರಿ ಕೊಳೀತಿದ್ದ ಎಲೆಗಳ ರಾಶೀನ ನೋಡಿದೆ. ಇಷ್ಟೆಲ್ಲಾ ಮೇಲೆ ಕೆಳಗೆ, ಒಳಗೆ ಹೊರಗೆ ನೋಡ್ತಾ ನೋಡ್ತಾ ಆನಂದವಾಗಿರೋವಾಗ ಬಾಣಲಿ ಒಳಗಿದ್ದ ಬಣ್ಣಗಳು ತಮ್ಮನ್ನು ತಾವೇ ಮರೆತು ಒಂದೇ ಬಿಳಿ ಇಲ್ಲ ಕಪ್ಪು ಆಗಿ ನನ್ನನ್ನೇ ಮಿಕಮಿಕ ನೋಡ್ತಿದ್ವು. ಅದಕ್ಕೇ ಒಗ್ಗರಣೆ ಹಾಕಿ ಹೊಡದು ಬಿಡೋಣ ಅಂತ ಆಸೆ ಆದರೂ, ಮಾಡೋಕೆ ಹೊರಟಿದ್ದು ಇದು ಅಲ್ವಲ್ಲ ಅಂತ ತಬ್ಬಿಬ್ಬಾಗಿ ನಿಂತೆ.

ಇದು ನಡೆದು ಎಷ್ಟೋ ವರ್ಷ ಆಗಿದ್ದರೂ ಈವತ್ತಿಗೂ ಸರಿಯಾದ ಬಣ್ಣ ಬಳಸದೇ ಮಾಡಿದ ಪಲ್ಯ ಗಂಟಲಲ್ಲಿ ಇಳಿಯೋಲ್ಲ. ಹಾಗೇನೆ ಕಪ್ಪೋ ಬಿಳಿಯೋ ಆಗಿಬಿಟ್ಟ ಪಲ್ಯ ಕಂಡರೆ ಮೈ ಝುಮ್ಮನ್ನತೆ.

ಎಷ್ಟೋ ಜನ ಕಿವಿನಲ್ಲಿ ಪಿಸುಗುಟ್ಟಿದ್ದಾರೆ- ಯಾಕೆ ಸುಮ್ಮನೆ ಬಣ್ಣದ ಬಗ್ಗೆ ತಲೆ ಕೆಡಿಸ್ಕೋತೀಯ, ಕಪ್ಪೋ ಬಿಳೀನೋ ಮೂಡಿಗೆ ಸರಿಯಾಗಿ ಯಾವುದು ಹೊಂದತ್ತೋ ತಿಂದು ಬಿಡು, ಬಂದವರಿಗೆ ಬಡಿಸಿಬಿಡು ಅಂತ.

ನಾನೂ ಅವರ ಕಿವಿನಲ್ಲಿ ಪಿಸುಗುಡಿತೀನಿ- ಬಣ್ಣ ಒತ್ತು ಕಳಕೊಂಡು ಬಣ ಕಟ್ಟಿಕೊಂಡರೆ ಎಲ್ಲ ಬಣಬಣ ಅಂತ.

ಅವರು ಉಂಡಿದ್ದು ಉಗುಳೋದೋ ಬೇಡವೋ ಅಂತ ಮುಖಮುಖ ನೋಡತಾರೆ.

ಅಳು ಬರುತ್ತದೆ: ಅಳುವಂಥದ್ದನ್ನು ನೋಡಿ ಜನ ನಕ್ಕಾಗ ಅಥವಾ ನಗದೇ ತುಟಿ ಬಿಗಿದು ಹಿಡಿದಾಗ ಅಥವಾ ಏನು ಮಾಡಬೇಕೆಂದು ಗೊತ್ತಾಗದೇ ಮುಖಮುಖ ನೋಡಿದಾಗ.
ಅಳು ಬರುತ್ತದೆ: ನೆನಪಿಟ್ಟುಕೊಳ್ಳಬೇಕಾದ್ದನ್ನು ಜನ ಮರೆತಾಗ ಅಥವಾ ನೆನಪು ಮಾಡಿಕೊಳ್ಳಲು ಹೆಣಗಿದಾಗ ಅಥವಾ ನೆನಪಾಗದೇ ಮಿಕಮಿಕ ನೋಡಿದಾಗ.
ಅಳು ಬರುತ್ತದೆ: ನೋಡಬೇಕಾದ್ದನ್ನು ಜನ ನೋಡದೇ ಹೋದಾಗ ಅಥವಾ ನೋಡಿ ಮುಖ ತಿರುಗಿಸಿದಾಗ ಅಥವಾ ನೋಡಿಯೂ ಬಿಂಕದಲ್ಲಿ ಕಣ್ಣು ಮುಚ್ಚಿ ಧ್ಯಾನಕ್ಕಿಳಿದಾಗ.

ಚಳಿಗಾಲದಲ್ಲಿ ಬಿಸಿಗಾಳಿಯ ಆಸೆಗೆ ಮೈಯೊಡ್ಡಿದಾಗ ಚರ್ಮ ನಗುತ್ತದೆ. ಚರ್ಮ ನಕ್ಕಿತೆಂದು ಮೂಳೆ ಸಿಟ್ಟುಮಾಡಿಕೊಂಡು ಸೆಟೆದುಕೊಳ್ಳುತ್ತದೆ. ಉಗುರುಗಳೆಲ್ಲಾ ಬೆಳೆಯುವ ಬದಲು ಕರಗಿ ಹೋಗುತ್ತದೆ.

ಇಪ್ಪತ್ತು ಮೂವತ್ತಿಗೆ ಜಾರಿ, ನಲವತ್ತಕ್ಕೆ ಮುಟ್ಟಿ ಐವತ್ತನ್ನೋ ಅರವತ್ತನ್ನೋ ತಬ್ಬುತ್ತದೆ ನಾಳೆ. ಹತ್ತರ ಮನಸ್ಸು ಮಾತ್ರ ಕಿರುಬೆರಳನ್ನು ಹಿಡಿದು ಪುಟ್ಟಪುಟ್ಟ ಹೆಜ್ಜೆ ಇಟ್ಟು ಹಿಂಬಾಲಿಸುತ್ತದೆ.

ಎಲ್ಲ ದಾಟಿ ಹೋದರೂ ಏನೋ ಉಳಿದುಬಿಡುತ್ತದೆ.

ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಮುಂದೆ ತೆರೆದುಕೊಳ್ಳುತ್ತಿರುವ ಹಾದಿ. ಹಿಂದೆ ಮುಚ್ಚಿಕೊಳ್ಳುತ್ತಿರುವ ಹೆಜ್ಜೆ ಗುರುತು. ರಸ್ತೆ ಪಕ್ಕದ ಮರದ ಹಳದಿ ಎಲೆಗಳು. ದೂರದ ಬೆಟ್ಟದ ಮೈಯೆಲ್ಲಾ ತುಂಬಿಕೊಂಡಿರುವ ಕುರಚಲು ಗಿಡಗಳು. ಯಾವುದೂ ಪ್ರತೀಕವಾಗಲು ಒಪ್ಪುತ್ತಿಲ್ಲ. ಒಪ್ಪಲೇ ಬೇಕೆಂದು ಒತ್ತಾಯ ಮಾಡಲಾರೆ. ಆದರೂ, ಪ್ರತೀಕವಾದರೆ ಎಲ್ಲಕ್ಕೂ ಹೆಚ್ಚು ಅರ್ಥಬರುತ್ತದೆ ಎಂದು ನನ್ನ ಮನಸ್ಸಿನಾಳದ ಆಸೆ.
ಪಕ್ಕದಲ್ಲೇ ಡೊಂಕು ಬಾಲ ಆಡಿಸುತ್ತಿದ್ದ ನಾಯಿ ನನ್ನ ಆಸೆ ಗೊತ್ತಾಗಿ ಹಂಗಿಸುವಂತೆ ಅಂಡು ತಿರುಗಿಸಿ ಹೊರಟು ಹೋಯಿತು. ಅದು ಎಚ್ಚರಿಕೆಯಿಂದ ತುಳಿಯದೇ ಇಟ್ಟ ಕಾಲ ನಡುವೆ ಹೊರಟ ಇರುವೆ ಸಾಲು. ಅದರ ಅಡಿಯ ಗಾರೆಯ ಮೇಲೆ ಇನ್ನೂ ಹಸಿಯಿದ್ದಾಗ ತುಂಟಾಟದಲ್ಲಿ ಮಾಡಿದ ಯಾರದೋ ಅಂಗೈ ಗುರುತು. ಎಲ್ಲಕ್ಕೂ ನನ್ನ ಆಸೆ ಗೊತ್ತಾಗಿ ಪಕಪಕ ನಗುತ್ತಿರುವುದು ನನಗೆ ಖಾತ್ರಿಯಾಯಿತು.
ಸರಿ, ಹಾಳಾಗಿ ಹೋಗಲಿ ಅಂದು ಕೊಂಡು ನನ್ನ ಕೈಯಲ್ಲಿ ವಕ್ರವಾಗಿ ಬೆಳೆದಿದ್ದ ಉಗುರನ್ನು ನೋಡಿಕೊಂಡೆ. ಅದರ ನೆರಳು ಇದ್ದಕ್ಕಿದ್ದ ಹಾಗೆ ನೆಲದ ಮೇಲೆ ಬಿದ್ದ ಕಡೆ ಹಳ್ಳವಾಯಿತು ಎಂಬ ಅನುಮಾನ ಬಂತು. ಬಗ್ಗಿ ನೋಡಿದೆ. ನೆರಳು ಬಿದ್ದದ್ದು ಎಲ್ಲಿ ಎಂದು ಗೊಂದಲವಾಗಿ ಸಣ್ಣಗೆ ಸಿಟ್ಟೂ ಬಂತು. ಯಾಕೆ ಯಾವುದರ ಮೇಲೆ ಅನ್ನುವುದಕ್ಕಿಂತ, ಎಷ್ಟು ಹೊತ್ತು ಎಷ್ಟು ಜೋರಾಗಿ ಎಂದು ಕೇಳುವುದು ಸೂಕ್ತ ಎಂದು ಹಲ್ಲು ಕಡಿದೆ.
ಹೆಚ್ಚು ಅರ್ಥ ಬರುವುದಿರಲಿ ಈ ಪ್ರತೀಕದ ಗಲಾಟೆಯಲ್ಲಿ ಇರುವ ಅರ್ಥವೂ ಕಳೆದುಕೊಳ್ಳುವ ಅಪಾಯ ನಿಜವಾಗ ತೊಡಗಿತು. ಕಣ್ಣು ಮುಚ್ಚಿದಾಗ ಆಗುವ ಅನುಭವ ಕತ್ತಲೆಯೇ? ಇದಕ್ಕೆ ಉತ್ತರ ಕಂಡು ಕೊಂಡರೆ ಸಾಕು, ಪ್ರತೀಕಗಳ ಗೋಜಿಗೇ ಹೋಗಬಾರದು. ಬೇಕಾದರೆ ಅವೇ ಬರಲಿ ಎಂದು ಮೊಂಡು ಹಿಡಿದು ಕೂತೆ.

ಪೂರ್ಣಚಂದ್ರ ತೇಜಸ್ವಿಯವರ “ಅಣ್ಣನ ನೆನಪು” ಪುಸ್ತಕದಲ್ಲಿ ಕುವೆಂಪುರವರ “ರಾಮಾಯಣ ದರ್ಶನಂ” ಗೆ ಜ್ಞಾನಪೀಠ ಪ್ರಶಸ್ತಿ ಬಂದ ಹೊತ್ತಿನ ಬಗ್ಗೆ ಪ್ರಸ್ತಾಪವಿದೆ. “ರಾಮಾಯಣ ದರ್ಶನಂ ಗಾತ್ರದಲ್ಲಿ ಮಾತ್ರ ಮಹಾಕಾವ್ಯ. ಕುವೆಂಪು ಕವಿ ಎನ್ನುವುದಾದರೆ ನಾನು ಕವಿಯೇ ಅಲ್ಲ, ನಾನು ಕವಿ ಎನ್ನುವುದಾದರೆ ಅವರು ಕವಿಯೇ ಅಲ್ಲ ಎಂದೆಲ್ಲ ಅಡಿಗರು ಕಿಡಿಕಾರಿದ್ದರು” ಎಂದು ನೆನಪಿಸಿಕೊಳ್ಳುತ್ತಾರೆ.
ಕನ್ನಡ ಕಾವ್ಯಲೋಕಕ್ಕೆ ಹೊಸ ತಿರುವನ್ನು ಕೊಟ್ಟ ಅತ್ಯಂತ ಪ್ರಭಾವಶಾಲಿ ಕವಿಯಾದ ಅಡಿಗರ ಎಷ್ಟೋ ಪದ್ಯಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ, ಪ್ರತಿಸಲವೂ ಮತ್ತೇನೋ ಹೊಸದು ಕಾಣುತ್ತದೆ. ಮುಂದೆ “ನಾನು ಹಿಂದು, ನಾನು ಬ್ರಾಹ್ಮಣ” ಎಂದು ಪದ್ಯ ಬರೆದು, ಜನಸಂಘಕ್ಕಾಗಿ ಚುನಾವಣೆಗೆ ಕೂಡ ಅಡಿಗರು ನಿಂತಿದ್ದರು. ಯಾಕೋ ತೇಜಸ್ವಿಯವರ ನೆನಪು ಓದುವಾಗ ಅಡಿಗರ ಈ