ವಿಪ್ಲವಗಳಲ್ಲಿ ಪ್ರತಿಮೆಗಳ ಹುಡುಕುವೆ ನಾನು-
ಮೊನ್ನೆ ಮುರಿದ ಮೂಳೆ, ನೆನ್ನೆ ಹರಿದ ನೆತ್ತರು,
ಇಂದು ಒಡೆದ ತಲೆ, ಈಗ ಹೋದ ಪ್ರಾಣಕ್ಕಿಂತ
ಸಾರ್ವಕಾಲಿಕ ಪ್ರತಿಮೆಗಳ ಶೋಧದಲ್ಲಿ ತೊಡಗಿರುವೆ,
ಡಿಸ್ಟರ್ಬ್ ಮಾಡಬೇಡಿ ಜನಗಳೇ, ದಯವಿಟ್ಟು!
ನನ್ನ ಪದ್ಯದ ಸಾಲುಗಳಲ್ಲಿ ಮೂಡುವ ರೂಪಕಮಾಲೆಯನ್ನು
ತೊಟ್ಟು ಮುಲುಗುತ್ತವೆ ನನ್ನ ಮುಗ್ಗಟ್ಟು
ಸೂಕ್ಷ್ಮ ಸಂವೇದನೆಯ ಕವಿಗೆ ಮಾತ್ರ ತಿಳಿಯುವ ಗುಟ್ಟು-
ಮರೆಯಬೇಡಿ ರಸಿಕರೇ, ದಯವಿಟ್ಟು.
ಸುಲಭ ಸಾಧ್ಯದ ತುಡಿತವೆಲ್ಲಾ ನಿಷಿದ್ಧ ನನಗೆ;
ದಟ್ಟವಾಗಿ ಅಡರಿಕೊಳ್ಳುವ ಮುಳ್ಳುಬೇಲಿ
ಮೈಗೆ ಸವರದ ಹಾಗೆ ನುಣುಚುವ ಸೃಜನಾತ್ಮಕ ನಡೆ
ನಡೆದು ಸವೆಸಬೇಕಲ್ಲ ದಾರಿ ಬಲು ಕಷ್ಟ,
ತಿಳಿದುಕೊಳ್ಳಿ ಸಹೃದಯರೇ, ದಯವಿಟ್ಟು.
ಕಳವಳದ ಬೀದಿ ಪ್ರತಿಭಟನೆಯೇನು;
ಬೆಚ್ಚನೆಯ ಕನಸಲ್ಲಿ ಹನಿಯುವ ರಕ್ತ, ಎರಗುವ ಪೆಟ್ಟು
ಕಲಕುತ್ತವೆ ನನ್ನನ್ನು ನೂರ್ಪಟ್ಟು,
ಅರಿತುಕೊಳ್ಳಿ ನನ್ನಂತಹ ಕವಿಗಳ ಸಂಕಷ್ಟವದು,
ಚಿಂತನಶೀಲರೇ, ದಯವಿಟ್ಟು.